ಕುಡತಿನಿ: ಇಂದು ಕುಡತಿನಿ ಪಟ್ಟಣದ ಹೆಚ್.ಎಲ್.ಸಿ ಕಾಲೋನಿ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿ ಸ್ಥಳದಲ್ಲಿ ಇಂದು ಬೆಳಿಗ್ಗೆ ಭೀಕರ ದುರ್ಘಟನೆ ಸಂಭವಿಸಿದೆ. ಕಾಂಕ್ರೀಟ್ ಲಿಫ್ಟ್ ಬಕೆಟ್ ಸುಮಾರು 60 ಅಡಿ ಎತ್ತರದಿಂದ ಕೆಳಗೆ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ವಿವರ:
ಪೊಲೀಸ್ ದಾಖಲೆಗಳ ಪ್ರಕಾರ, ದಿನಾಂಕ 21/06/2026 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ಕುಡತಿನಿ-ಕುರುಗೋಡು ರಸ್ತೆಯ ಪಕ್ಕದ ಹೆಚ್.ಎಲ್.ಸಿ ಕಾಲೋನಿ ಬಳಿ ನಿರ್ಮಾಣ ಹಂತದಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಈ ದುರ್ಘಟನೆ ನಡೆದಿದೆ. ಮೃತಪಟ್ಟ ಕಾರ್ಮಿಕರನ್ನು ತಂಡ ಮಲ್ಲಪ್ಪ (52 ವರ್ಷ) ಮತ್ತು ನೀಲಪ್ಪ (35 ವರ್ಷ) ಎಂದು ಗುರುತಿಸಲಾಗಿದೆ.
ನೀರಿನ ಟ್ಯಾಂಕ್ನ ಮೇಲೆ ಮರಳು, ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳನ್ನು ಲಿಫ್ಟ್ ಮೂಲಕ ಮೇಲೆ ಸಾಗಿಸುವಾಗ, ಕಾಂಕ್ರೀಟ್ ಲಿಫ್ಟ್ ಬಕೆಟ್ನ ವೈರ್ ತುಂಡಾಗಿ ಸುಮಾರು 60 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಈ ವೇಳೆ ಟ್ಯಾಂಕ್ ಬಳಿ ಕೆಳಗೆ ಕೆಲಸ ಮಾಡುತ್ತಿದ್ದ ತಂಡ ಮಲ್ಲಪ್ಪ ಮತ್ತು ನೀಲಪ್ಪ ಅವರ ಮೇಲೆ ಬಕೆಟ್ ಬಿದ್ದ ಪರಿಣಾಮ ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸ್ ಕ್ರಮ: ಕುಡತಿನಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 94/2026 ಕಲಂ 289, 106(1) BNS-2023 ರಡಿ ಪ್ರಕರಣ ದಾಖಲಾಗಿದೆ. ಕಾಮಗಾರಿಯ ಗುತ್ತಿಗೆದಾರ ಬಸವರಾಜ್ ಹಾಗೂ ಸೂಪರ್ವೈಸರ್ ಖಾದರ್ ಭಾಷಾ ವಿರುದ್ಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತಮೂರ್ತಿ ತಿಳಿಸಿದ್ದಾರೆ.
ಸ್ಥಳೀಯರ ಆಕ್ರೋಶ: ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಹೆಲ್ಮೆಟ್, ಬೆಲ್ಟ್ ಮೊದಲಾದ ಯಾವುದೇ ಸುರಕ್ಷತಾ ಸಾಮಾಗ್ರಿಗಳನ್ನು ನೀಡದೇ ಕಾರ್ಮಿಕರಿಂದ ಕೆಲಸ ಮಾಡಿಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ದುರ್ಘಟನೆಯಿಂದ ಕುಡತಿನಿ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.