ಬಳ್ಳಾರಿ : ಕನ್ನಡ ನಾಡಿನ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರೇಕ್ಷಕರು ಹೆಚ್ಚಿರುವ ಸ್ಥಳಗಳಿಗೇ ನೇರವಾಗಿ ತೆರಳಿ ಪ್ರದರ್ಶನ ನೀಡುವ ಕಲಾ ನಡಿಗೆ - ನಿಮ್ಮ ಬಳಿಗೆ' ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹೇಳಿದರು.
ತಾಲೂಕಿನ ಬ್ಯಾಲಚಿಂತ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಲಾವಿದರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕಲಾ ನಡಿಗೆ - ನಿಮ್ಮ ಬಳಿಗೆ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲಾವಿದರೇ ಜನರೆಡೆಗೆ ನಡೆದು ಬಂದು ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ವಿಭಿನ್ನ ಆಶಯವನ್ನು ಈ ಪ್ರಸಕ್ತ ಸಾಲಿನ ಯೋಜನೆ ಹೊಂದಿದೆ ಎಂದು ತಿಳಿಸಿದರು..

ಸಾಂಸ್ಕೃತಿಕ ವೈಭವ: ಕಾರ್ಯಕ್ರಮದ ಅಂಗವಾಗಿ ಬಳ್ಳಾರಿಯ ಕುಮಾರಿ ಸಮೀರಾ ಎಸ್.ಕೆ. ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಸಮೂಹ ನೃತ್ಯ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ತದನಂತರ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ಧಾತ್ರಿ ರಂಗಸಂಸ್ಥೆ ವತಿಯಿಂದ ಪ್ರದರ್ಶನಗೊಂಡ ‘ಶ್ರೀಕೃಷ್ಣ ಸಂಧಾನ’ ಹಾಸ್ಯ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಕಲಾವಿದರ ಅದ್ಭುತ ಅಭಿನಯ, ಚುರುಕಿನ ಸಂಭಾಷಣೆ ಹಾಗೂ ಆಕರ್ಷಕ ರಂಗವಿನ್ಯಾಸಕ್ಕೆ ಜನರಿಂದ ಭರಪೂರ ಚಪ್ಪಾಳೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಗ್ರಾಮದ ಹಿರಿಯ ಮುಖಂಡ ಶಿವಶಂಕರಗೌಡ, ಹಿರಿಯ ನೃತ್ಯ ಕಲಾವಿದ ಎಸ್.ಕೆ.ಆರ್. ಜಿಲಾನಿ ಭಾಷ, ಬಯಲಾಟ ಕಲಾವಿದ ಮುದ್ದಟನೂರು ತಿಪ್ಪೇಸ್ವಾಮಿ ಹಾಗೂ ತೊಗಲುಗೊಂಬೆ ಕಲಾವಿದ ಸುಬ್ಬಣ್ಣ ಸೇರಿದಂತೆ ಗ್ರಾಮದ ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳು ಇತರರಿದ್ದರು.