ಬಳ್ಳಾರಿ: ಜಿ.ಎಸ್.ಟಿ ವರ್ಗಾವಣೆ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಳ್ಳಾರಿಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಮಲ್ಲಿಕಾರ್ಜುನ ಕುಬಸದ ಅವರು ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿತ ಅಧಿಕಾರಿಯು ಕಚೇರಿಯ ಒಳಗೆ ಫಿರ್ಯಾದಿದಾರರಿಂದ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅವರನ್ನು ರೆಡ್-ಹ್ಯಾಂಡ್ ಆಗಿ ದಸ್ತಗಿರಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಸಿರುಗುಪ್ಪದ 12ನೇ ವಾರ್ಡ್, ವಿಜಯ ವಿಠಲ ನಗರದ ನಿವಾಸಿಯಾದ ಕೆ.ಶ್ರೀನಿವಾಸರಾವ್ ಅವರು ತೆರಿಗೆ ಸಲಹೆಗಾರರು ಮತ್ತು ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿರುಗುಪ್ಪದ ಶ್ರೀ ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಮಾಲೀಕರಾದ ಕೆ.ಮಲ್ಲಿಕಾರ್ಜುನ ಅವರಿಗೆ ಸಂಬಂಧಿಸಿದ ಹಳೆಯ ಜಿ.ಎಸ್.ಟಿ ಸಂಖ್ಯೆ (29ಬಿಜಿಸಿಪಿಎಂ8288ಡಿ1ಜೆಡ್0) ತಾಂತ್ರಿಕ ದೋಷದಿಂದ ಮೈಗ್ರೇಟ್ ಆಗಿರಲಿಲ್ಲ. ಈ ಹಳೆಯ ಜಿ.ಎಸ್.ಟಿ ಖಾತೆಯಲ್ಲಿದ್ದ ಇನ್ಪುಟ್ ಟ್ಯಾಕ್ಸ್ ಅನ್ನು ಹೊಸ ಜಿ.ಎಸ್.ಟಿ ಸಂಖ್ಯೆಗೆ (29ಬಿಜಿಸಿಪಿಎಂ8288ಡಿ2ಜೆಡ್ಜೆಡ್) ಸೇರಿಸಿಕೊಡುವಂತೆ ಶ್ರೀನಿವಾಸರಾವ್ ಅವರು ವಾಣಿಜ್ಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಈ ಸರ್ಕಾರಿ ಕೆಲಸವನ್ನು ಮಾಡಿಕೊಡಲು ಬಳ್ಳಾರಿಯ ಎಲ್.ಜಿ.ಎಸ್.ಟಿ.ಓ 495ರ ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಮಲ್ಲಿಕಾರ್ಜುನ ಕುಬಸದ ಅವರು ರೂ.90,000 ರೂಪಾಯಿಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಚ್ಛಿಸದ ಶ್ರೀನಿವಾಸರಾವ್ ಅವರು ಈ ಕುರಿತು ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಅಪರಾಧ ಸಂಖ್ಯೆ: 08/2026, ಕಲಂ 7(ಎ) ಪಿಸಿ ಆಕ್ಟ್ 1988 (ತಿದ್ದಪಡಿ ಕಾಯ್ದೆ-2018) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಲೋಕಾಯುಕ್ತ ಯಶಸ್ವಿ ಕಾರ್ಯಾಚರಣೆ:
ಶುಕ್ರವಾರ ಮಧ್ಯಾಹ್ನ ಸುಮಾರು 1.40 ಗಂಟೆಗೆ ಬಳ್ಳಾರಿ ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯ ಒಳಗಡೆ ಆರೋಪಿತ ಅಧಿಕಾರಿ ಮಲ್ಲಿಕಾರ್ಜುನ ಕುಬಸದ ಅವರು ಪಿರ್ಯಾದಿದಾರರಿಂದ 90,000 ರೂ.ಗಳ ಲಂಚದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲಂಚದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಅಧಿಕಾರಿಯನ್ನು ಕಚೇರಿಯಲ್ಲಿಯೇ ದಸ್ತಗಿರಿ ಮಾಡಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯು ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಹಾಗೂ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಅವರ ನೇತೃತ್ವದಲ್ಲಿ ನಡೆದಿದೆ. ತಂಡದಲ್ಲಿ ಪೊಲೀಸ್ ಉಪಾಧೀಕ್ಷಕ ಸಚಿನ್ ಎಸ್. ಚಲುವಾದಿ (ಕಲೋ, ಹೊಸಪೇಟೆ), ಪೊಲೀಸ್ ನಿರೀಕ್ಷಕ ಸುರೇಶ್ ಎಮ್. ಭಾವಿಮನಿ ಮತ್ತು ಸಿಬ್ಬಂದಿಗಳಾದ ಚಂದ್ರಶೇಖರ್, ವಸಂತಕುಮಾರ, ಅರವಿಂದ, ಅಂಜಿನಪ್ಪ, ಹನುಮಂತಪ್ಪ ಹಾಗೂ ಗೊಲ್ಲರ ದಾಸಪ್ಪ ಭಾಗವಹಿಸಿದ್ದರು.