ಇನ್ನೊಬ್ಬರ ಆರೋಗ್ಯ ಕಾಪಾಡಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಕರೆ
ಬಳ್ಳಾರಿ : ಸಿಗರೇಟ್, ಬೀಡಿ ಸೇದುವವರಿಗಿಂತ ಅವರ ಸುತ್ತಮುತ್ತಲಿರುವ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಹಾನಿಯಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ದೇಹದ ಇತರ ಪ್ರಮುಖ ಅಂಗಾಂಗಗಳು ಹಾನಿಗೀಡಾಗುವುದರಿಂದ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ತಂಬಾಕು ಉತ್ಪನ್ನಗಳ ಬಳಕೆಯನ್ನು ತಿರಸ್ಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ಕರೆ ನೀಡಿದ್ದಾರೆ.
ಮೇ 31ರ 'ವಿಶ್ವ ತಂಬಾಕು ರಹಿತ ದಿನ'ದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಕಟಣೆ ಹೊರಡಿಸಿದ ಅವರು “ಆಕರ್ಷಣೆಯನ್ನು ಬಹಿರಂಗಪಡಿಸುವುದು: ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು" ಈ ವರ್ಷದ ಘೋಷಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಕಾಯಿಲೆಗಳು ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು 1987 ರಿಂದ ಈ ದಿನಾಚರಣೆಯನ್ನು ಜಾರಿಗೆ ತಂದಿದೆ. ತಂಬಾಕು ಕಂಪನಿಗಳ ವ್ಯಾಪಾರ ನೀತಿಗಳ ಬಗ್ಗೆ ಜನರನ್ನು ಎಚ್ಚರಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.

ತಂಬಾಕಿನ ರೂಪಗಳು ಮತ್ತು ಹಾನಿಕಾರಕ ಪರಿಣಾಮಗಳು:
ವಾಣಿಜ್ಯ ಬೆಳೆಯಾಗಿರುವ ತಂಬಾಕು ಉತ್ಪನ್ನಗಳಲ್ಲಿ 4,000ಕ್ಕೂ ಹೆಚ್ಚು ರಾಸಾಯನಿಕಗಳಿದ್ದು, ಇದರಲ್ಲಿರುವ 'ನಿಕೋಟಿನ್' ಎಂಬ ರಾಸಾಯನಿಕವು ತೀವ್ರ ವ್ಯಸನವನ್ನು ಉಂಟುಮಾಡುತ್ತದೆ. ಸಿಗರೇಟ್, ಬೀಡಿ, ಸಿಗಾರ್, ಗುಟ್ಕಾ, ಖೈನಿ, ಜರ್ದಾ ಮತ್ತು ಹುಕ್ಕಾ ರೂಪದಲ್ಲಿ ಇದನ್ನು ಬಳಸಲಾಗುತ್ತಿದ್ದು, ಇದರಿಂದ ಈ ಮಾರಕ ಪರಿಣಾಮಗಳು ಎದುರಾಗುತ್ತವೆ.
ಕ್ಯಾನ್ಸರ್ ಅಪಾಯದಿಂದ ಶ್ವಾಸಕೋಶ, ಬಾಯಿ, ಗಂಟಲು ಮತ್ತು ನಾಲಿಗೆಯ ಕ್ಯಾನ್ಸರ್ ಸಾಧ್ಯತೆ ಹೆಚ್ಚುತ್ತದೆ. ಹೃದಯಾಘಾತ (Heart Attack) ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ನಿಯಮ ಉಲ್ಲಂಘನೆಗೆ ದಂಡ:
ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಕಾಯ್ದೆಯಡಿ ದಂಡ ವಿಧಿಸಲಾಗುವುದು ಹಾಗೂ ತಂಬಾಕು ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು.
ತಂಬಾಕು ತ್ಯಜಿಸುವುದರಿಂದ ಉಸಿರಾಟ ವ್ಯವಸ್ಥೆ ಸುಧಾರಿಸುತ್ತದೆ, ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ, ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಇದರೊಂದಿಗೆ ಅನಗತ್ಯ ಹಣದ ವ್ಯಯ ತಪ್ಪಿ, ಜೀವನದ ಗುಣಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.
ಕಡ್ಡಾಯ 'ಸ್ಮೋಕಿಂಗ್ ಝೋನ್' ಮತ್ತು ಶಾಲಾ ಜಾಗೃತಿ:
ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಮುಖ ಹೋಟೆಲ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕಡ್ಡಾಯವಾಗಿ ಪ್ರತ್ಯೇಕ 'ಸ್ಮೋಕಿಂಗ್ ಝೋನ್' (ಧೂಮಪಾನ ವಲಯ) ಸ್ಥಾಪಿಸಲು ಸ್ಥಳೀಯ ಆಡಳಿತಗಳ ಸಹಕಾರ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯ:
ಜಿಲ್ಲಾ ಆಸ್ಪತ್ರೆಯ ಕೋಣೆ ಸಂಖ್ಯೆ-43 ರಲ್ಲಿ ತಂಬಾಕು ವ್ಯಸನಿಗಳಿಗಾಗಿ 'ತಂಬಾಕು ವ್ಯಸನ ಮುಕ್ತ ಕೇಂದ್ರ' ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಾರ್ವಜನಿಕರಿಗೆ ಉಚಿತ ಆಪ್ತಸಮಾಲೋಚನೆ ಹಾಗೂ ಅಗತ್ಯ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದ್ದು, ವ್ಯಸನಿಗಳು ಇದರ ಸದುಪಯೋಗ ಪಡೆದುಕೊಂಡು ತಂಬಾಕು ರಹಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿ ಆರೋಗ್ಯಾಧಿಕಾರಿಗಳು ವಿನಂತಿಸಿದ್ದಾರೆ.
ಉಚಿತ ಸಹಾಯವಾಣಿ:
ತಂಬಾಕು ಮುಕ್ತ ಜೀವನಕ್ಕಾಗಿ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1800-112-356 ಗೆ ಕರೆ ಮಾಡಬಹುದು ಅಥವಾ ಹತ್ತಿರದ ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.