ಬೆಂಗಳೂರು : ದೇಶದ ಅಂತಃಸತ್ವವನ್ನು ಕಲಕಿರುವ ಜಂತರ್ ಮಂತರ್ ಪ್ರತಿಭಟನೆ ಸ್ವಾತಂತ್ರ್ಯ ಸಂಗ್ರಾಮದ ನಂತರ ಅತಿದೊಡ್ಡ ಯುವ ಸಂಗ್ರಾಮವಾಗಿದ್ದು, ಈ ಹೋರಾಟದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ವಾಧಿಕಾರಿ ಆಡಳಿತ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯದಿದ್ದರೆ ಯುವ ಸಂಗ್ರಾಮ ಮತ್ತಷ್ಟು ಪ್ರಕೋಪಕ್ಕೆ ತಲುಪಲಿದೆ. ಹೋರಾಟದ ಕಿಚ್ಚಿಗೆ ಸರ್ವಾಧಿಕಾರಿಗಳೆಲ್ಲಾ ಭಸ್ಮವಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡಾ. ಆನಂದ ಕುಮಾರ್, ಆಗ ವಿದ್ಯಾರ್ಥಿಗಳ ಪಾಲಿಗೆ ವಿದ್ಯಾರ್ಥಿ ನಾಯಕರಾಗಿದ್ದ ಧರ್ಮೇಂದ್ರ ಪ್ರಧಾನ್, ಈಗ ಖಳನಾಯಕರಾಗಿದ್ದಾರೆ. ಪ್ರಧಾನ್ ಶಿಕ್ಷಣ ಸಚಿವರಾಗುತ್ತಿದ್ದಂತೆ ಪಠ್ಯಕ್ರಮ, ಬೋಧನಾ ವಿಧಾನ, ಕುಲಪತಿಗಳ ಆಯ್ಕೆ ಎಲ್ಲವೂ ಕೇಸರಿಮಯವಾಯಿತು. 2024ರಲ್ಲಿ ನೀಟ್ ಪ್ರಶ್ನೆಪರೀಕ್ಷೆ ಸೋರಿಕೆಯಾಗಿ ದೇಶದಾದ್ಯಂತ ಸುದ್ದಿಯಾಯಿತು. 2026ರಲ್ಲಿ ಮತ್ತೊಮ್ಮೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಹದಿನೇಳು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ದೇಶದ ಶಕ್ತಿ ಎಂದು ಬಣ್ಣಿಸುವ ಯುವಜನತೆಯ ಭವಿಷ್ಯಕ್ಕೇ ಕತ್ತಲು ಆವರಿಸಿತು. ಆದರೆ ಮೋದಿ ಸರ್ಕಾರ ಧರ್ಮೇಂದ್ರ ಪ್ರಧಾನ್ ಅವರನ್ನು ಎಲ್ಲಾ ಹಂತದಲ್ಲೂ ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಲಾಠಿ, ಭೂಟಿನೇಟು ಬೀಳಲು ಕೇಂದ್ರ ಸಚಿವ ಅಮಿತ್ ಶಾ ಅವರೇ ನೇರ ಕಾರಣ. ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಲವು ಭಾರಿ ಸೋತಿರುವ ಅಮಿತ್ ಶಾ ಸಚಿವರಾಗಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಅಮಿತ್ ಶಾ ನೇರ ಖಾರಣವಾಗಿದ್ದು, ಇದು ಖಂಡನೀಯ. ವಿದ್ಯಾರ್ಥಿಗಳ ಹೋರಾಟಕ್ಕೆ ಎದೆಗೆ ಎದೆಗೊಟ್ಟು ಪ್ರಧಾನಿ ಮನೆ ಮುಂದೆ ಪ್ರತಿಭಟನೆ ನಡೆಸಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕ ಪ್ರಿಯಾಂಕ ಗಾಂಧಿ ಯುವ ಸಮೂಹಕ್ಕೆ ಬೆಂಬಲವಾಗಿದ್ದಾರೆ. ಸದನದ ಒಳಗೆ, ಸದನದ ಹೊರಗಡೆ ವಿದ್ಯಾರ್ಥಿ ಹೋರಾಟಕ್ಕೆ ಧೀಶಕ್ತಿಯಾಗಿ ಹೊರ ಹೊಮ್ಮಿದ್ದಾರೆ.
ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿರುವ ಕಾರಣಗಳೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ವಿದ್ಯಾರ್ಥಿಗಳ ಮಾತುಗಳನ್ನು ಕಿವಿಗೊಟ್ಟು ಕೇಳಿ, ಗ್ರಹಿಸುವ ತಾಳ್ಮೆ ಸರ್ಕಾರಕ್ಕೆ ಇಲ್ಲವಾಗಿರುವುದು ದುರಂತ. ಪ್ರತಿಭಟನೆಗಳನ್ನು ಶಾಂತಿಯುತವಾಗಿ ಮತ್ತು ನಿಯಮಾನುಸಾರ ನಡೆಸಲು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಠಿಸುವುದು ಸರ್ಕಾರದ ಕರ್ತವ್ಯ ಮತ್ತು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸಮಸ್ಯೆಗಳಿಗೆ ದೀರ್ಘಕಾಲದ ಪರಿಹಾರ ಒದಗಿಸಬೇಕು. ಹಿಂಸೆಯ ಮೂಲಕ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು ಎಂದಿದ್ದಾರೆ.
ಈ ಹೋರಾಟದಲ್ಲಿ ವಿದ್ಯಾರ್ಥಿಗಳ ಭದ್ರತೆಗಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶಾಂತಿಯುತ ಹೋರಾಟಕ್ಕೆ ಸೂಕ್ತ ವೇದಿಕೆ ನಿರ್ಮಿಸಬೇಕು. ಕೇಂದ್ರದ ಯುವ ಶಕ್ತಿ ವಿರೋಧಿ ಧೋರಣೆಗೆ ಜಗತ್ತಿನಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಈ ಹೋರಾಟ ಜ್ವಾಲಾಮುಖಿ ಸ್ವರೂಪ ಪಡೆಯಲಿದೆ. ಹಾಗಾಗಿ ಈಗಲೇ ಎಚ್ಚೆತ್ತುಕೊಂಡು ಧರ್ಮೇಂದ್ರ ಪ್ರಧಾನ್, ಅಮಿತ್ ಶಾ ರಾಜೀನಾಮೆ ಪಡೆಯದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಖುರ್ಚಿಗೆ ಕುತ್ತು ಬರಲಿದೆ ಎಂದು ಡಾ. ಆನಂದ ಕುಮಾರ್ ಎಚ್ಚರಿಕೆ ನೀಡಿದ್ದಾರೆ.