ಬಳ್ಳಾರಿ: ತಾಳೂರು ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಚಲಿಸುವ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಕಾಮಗಾರಿಯ ಹಿನ್ನೆಲೆ:
ಲೋಕೋಪಯೋಗಿ ಇಲಾಖೆಯ ಕೆಎಂಇಆರ್ಸಿ ಯೋಜನೆ ಅಡಿಯಲ್ಲಿ ರಾಜ್ಯ ಹೆದ್ದಾರಿ-61 ಮತ್ತು ಹೆದ್ದಾರಿ-128 ಕ್ಕೆ ಸೇರುವ ದೇವದುರ್ಗ-ಅಮರಾಪುರ-ಭೋಗಾವತಿ-ಹಿರೇಕೋಟ್ನೇಕಲ್-ತಾಳೂರು-ಬಳ್ಳಾರಿ-ರೂಪನಗುಡಿ-ಚೆಳ್ಳಗುರ್ಕಿ ರಸ್ತೆಯ ಚತುಷ್ಪಥ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕೋರ್ರಗುಂದಿ ಮತ್ತು ಹಂದ್ಯಾಳ್ ಗ್ರಾಮಗಳ ಮಧ್ಯೆ ಬರುವ ಎಲ್.ಎಲ್.ಸಿ ಕಾಲುವೆಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಸೂಕ್ಷ್ಮ ರಸ್ತೆಯಲ್ಲಿ ಭಾರಿ ಗಾತ್ರದ ಸರ್ಕಾರಿ ಬಸ್ಸುಗಳು ನಿರಂತರವಾಗಿ ಸಂಚರಿಸುವುದರಿAದ ಸೇತುವೆ ಕಾಮಗಾರಿಗೆ ತೀವ್ರ ಅಡಚಣೆಯಾಗುತ್ತಿತ್ತು. ಇದನ್ನು ಪರಿಗಣಿಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ವರದಿ ನೀಡಿದ್ದರು.
ಹಾಗಾಗಿ ಮೋಟಾರ್ ವಾಹನ ಕಾಯ್ದೆ 1988ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989ರ ನಿಯಮ 221 ಎ (5) ರನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಪರ್ಯಾಯ ಮಾರ್ಗಗಳು:
ಬಳ್ಳಾರಿಯಿಂದ ಹೊರಡುವ ಬಸ್ಸುಗಳು ಕೋಳೂರು ಕ್ರಾಸ್ – ದಮ್ಮೂರು – ಡಿ. ಕಗ್ಗಲ್ – ಚಾನಾಳು – ಚಾನಾಳು ಕ್ರಾಸ್ ಮಾರ್ಗವಾಗಿ ತಾಳೂರು ಗ್ರಾಮವನ್ನು ತಲುಪುವುದು.
ಪರ್ಯಾಯವಾಗಿ ಬಳ್ಳಾರಿಯಿಂದ ಮೋಕಾ – ಬಸರಕೋಡು – ಹಿರೇಹಡಗಲಿ ಮಾರ್ಗವಾಗಿ ತಾಳೂರು ಗ್ರಾಮಕ್ಕೆ ಸಂಚರಿಸಬಹುದಾಗಿದೆ.
ಈ ಆದೇಶವು ಆಗಸ್ಟ್ 06 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಸ್ತೆಯ ಪರ್ಯಾಯ ತಿರುವುಗಳಲ್ಲಿ ಸೂಕ್ತ ಸಂಕೇತ ಫಲಕಗಳನ್ನು ಅಳವಡಿಸಲು ಹಾಗೂ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ತಾತ್ಕಾಲಿಕ ಬದಲಾವಣೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.