ಹಾಸನ: ಗಾಂಧಿ ಮತ್ತು ಗ್ರಾಮ ಗೊರೂರರ ಕಣ್ಣುಗಳಾಗಿದ್ದವು ಎಂದು ಲೇಖಕರು ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕ ಗೊರೂರು ಶಿವೇಶ್ ತಿಳಿಸಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ವತಿಯಿಂದ ಹಾಸನ ನಗರ ಸತ್ಯಮಂಗಲದ ಟೈಮ್ಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನ ಕಾರ್ಯಕ್ರಮದ ಅಂಗವಾಗಿ ಗೊರೂರರ ಬದುಕು ಮತ್ತು ಬರಹಗಳಲ್ಲಿ ಗಾಂಧಿ ಮತ್ತು ಗ್ರಾಮ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ
ಗಾಂಧೀಜಿಯವರ ಸರಳತೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗೊರೂರರಿಗೆ ಗ್ರಾಮ ಹೃದಯವಾಗಿದ್ದರೆ ಗಾಂಧೀಜಿಯವರು ಆತ್ಮವಾಗಿದ್ದಾರೆ. ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗೊರೂರರು ಗಾಂಧೀಜಿಯವರ ಆತ್ಮಕಥೆಯನ್ನು ಕನ್ನಡಕ್ಕೆ ತಂದರು. ಗ್ರಾಮೋದ್ಧಾರದ ಅಂಗವಾಗಿ ಗುಡಿ ಕೈಗಾರಿಕೆ, ಗ್ರಾಮೋದ್ಯೋಗ ಭವನ, ಸೇವಾ ಸಹಕಾರ ಸಂಘ ,ಊರಿನ ಸ್ವಚ್ಛತೆ ,ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ ಪ್ರೇರಣೆ ನೀಡಿ ಗೊರೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಶ್ರಮಿಸಿದರು. ಇದರ ಜೊತೆಗೆ ಜನಪದ ಗೀತೆಗಳ ಸಂಗ್ರಹಕಾರರಾಗಿ ಹಳ್ಳಿಯ ಹಾಡುಗಳು ಕೃತಿಯನ್ನು ಹೊರ ತಂದರು. ತಮ್ಮ ಕಥೆ, ಪ್ರಬಂಧಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಹಿಡಿದಿಟ್ಟರು. ಅವರ ಕಥೆಯನ್ನಾಧರಿಸಿದ ಭೂತಯ್ಯನ ಮಗ ಅಯ್ಯು ಜನಪ್ರಿಯ ಮತ್ತು ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಲು ಅದರಲ್ಲಿ ಬಿಂಬಿತವಾದ ಗ್ರಾಮೀಣ ಸಂಸ್ಕೃತಿಯು ಒಂದು ಕಾರಣ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುತ್ರಿ ಶ್ರೀಮತಿ ಗೊರೂರು ವಸಂತಿಮೂರ್ತಿ ನಮ್ಮ ತಂದೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಸಬರಮತಿಯಲ್ಲಿ ಗಾಂಧೀಜಿಯವರ ಆಶ್ರಮದಲ್ಲಿ ಇದ್ದು ಆಶ್ರಮದಿಂದ ಹೊರ ತರುತ್ತಿದ್ದ ಪತ್ರಿಕೆಗಳಲ್ಲಿ ಕಂಪೋಸಿಟರ್ ಕೆಲಸ ನಿರ್ವಹಿಸಿದ್ದಲ್ಲದೆ ಬೆಂಗಳೂರಿನ ಕೆಂಗೇರಿಯ ಖಾದಿ ಭಂಡಾರದಲ್ಲಿ ಕೆಲಸ ನಿರ್ವಹಿಸಿ ಮುಂದೆ ಪರೀಕ್ಷಕರಾಗಿ ಕೆಲಸ ಮಾಡಲು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹೊರಟಾಗ ಅವರೇ ಬರೆದ ನಮ್ಮೂರಿನ ರಸಿಕರು ಪಠ್ಯವನ್ನು ಓದಿ ಬರೆಯಬೇಕಾಗಿ ಬಂತು. ಗೊರೂರು ಟ್ರಸ್ಟ್ ಮೂಲಕ ಗೊರೂರಿನ ಅವರ ವಾಸದ ಮನೆಯನ್ನು ಪುಸ್ತಕ ವಸ್ತು ಸಂಗ್ರಹಾಲಯ ಹಾಗೂ ಸ್ಮರಣ ಭವನ ಮಾಡಲು ಮತ್ತು ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲು ಹಾಗೂ ಗೊರೂರರು ತಮ್ಮ ಅಂತಿಮ ದಿನಗಳನ್ನು ಕಳೆದ ಅವರು ವಾಸಿಸುತ್ತಿದ್ದ ರಾಜಾಜಿನಗರದ ಮೆಟ್ರೋ ಸ್ಟೇಷನ್ ಗೆ ಗೊರೂರರ ಹೆಸರನ್ನು ಇಡಬೇಕೆಂದು ಮನವಿ ಮಾಡಿದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಗೊರೂರರು ಸ್ವಾತಂತ್ರ್ಯ ಹೋರಾಟ ಮತ್ತು ಸಾಹಿತ್ಯ, ಜನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಸಮಾಜಮುಖಿ ಕೆಲಸಗಳನ್ನು ಯುವಜನರಿಗೆ ಪರಿಚಯಿಸಲು ಶಾಲಾಕಾಲೇಜುಗಳಲ್ಲಿ ಜೊತೆಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಹೃದಯರ ಬೆಂಬಲದೊಂದಿಗೆ ನಡೆಸಲು ಪ್ರಯತ್ನಿಸಿರುವುದಾಗಿ ತಿಳಿಸಿದರು.
ತಾವು ಡಾ.ಗೊರೂರು ಸ್ಮರಣ ಸಮಿತಿ ಮಾಡಿ 1991ರಿಂದಲೇ ಅವರ ನಿವಾಸವನ್ನು ಸ್ವಾರಕವಾಗಿಸಲು ಹಲವಾರು ಸೆವಿನಾರ್ ಗಳನ್ನು ಏರ್ಪಡಿಸಿ ಹಾಸನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈಗಲೂ ಈ ವೇದಿಕೆ ಮೂಲಕ ಮತ್ತೊಮ್ಮೆ ಮನವಿ ಮಾಡುತ್ತಿದ್ದು ಸರ್ಕಾರ ಈ ದಿಶೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋರಿದರು. ಗೊರೂರಿಗೆ ಭೇಟಿ ನೀಡುವ ಪ್ರವಾಸಿಗರು, ಸಾಹಿತ್ಯಾಭಿಮಾನಿಗಳು ಅವರ ಮನೆ ನೋಡಲು ಇಚ್ಛಿಸುತ್ತಾರೆ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಚಿತ್ರಕಲಾವಿದ ಬಿ ಎಸ್ ದೇಸಾಯಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಮತ್ತು ಕಲೆಯ ಕುರಿತಾಗಿ ಆಸಕ್ತಿ ಮೂಡಿಸಲು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ವತಿಯಿಂದ ಟೈಮ್ಸ್ ಪಿಯು ಕಾಲೇಜ್ ನೆರವಿನಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದು ತುಂಬಾ ಫಲಪ್ರದವಾಗಿದೆ ಎಂದರು
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಮತ್ತು ಪ್ರಾಧ್ಯಾಪಕರಾದ ಡಾ. ಕುಶಾಲ್ ಬರಗೂರು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಅನ್ನು ದೂರವಿಟ್ಟು ಪುಸ್ತಕವನ್ನು ಕೈಗಿಡಿಯಬೇಕು. ಮೊಬೈಲ್ ನಲ್ಲಿ ನೋಡಿದ್ದು ಮರೆತು ಹೋದರೆ ಪುಸ್ತಕದಲ್ಲಿ ಓದಿದ್ದು ಮಸ್ತಕದಲ್ಲಿ ಉಳಿಯುತ್ತದೆ ಎಂದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಟೈಮ್ಸ್ ಪಿಯು ಕಾಲೇಜಿನ ಅಧ್ಯಕ್ಷರು ಎ.ಬಿ. ಸುರೇಂದ್ರ ಕುಮಾರ್ ಮಾತನಾಡಿ ಹೇಮಾವತಿ ಜಲಾಶಯದ ಮುಳುಗಡೆ ಪ್ರದೇಶ ಆಂಜನೇಯಪುರ ತಮ್ಮ ಹುಟ್ಟಿದ ಊರಾಗಿದ್ದು ತಮಗೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಶಿಕ್ಷಕರಾಗಿದ್ದ ನಮ್ಮ ತಂದೆಯ ಆಸೆ ಪ್ರೋತ್ಸಾಹ ಕಾರಣವಾಗಿದೆ. ಇಂದು ನಮ್ಮ ಶಿಕ್ಷಣ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಕ್ರಿಯಾತ್ಮಕವಾಗಿ ಕಾರ್ಯ ಪ್ರವೃತ್ತವಾಗಿದೆ ಎಂದರು.
ಇದೇ ಸಂದರ್ಭ ಲೇಖಕ ಗೊರೂರು ಶಿವೇಶ್ ಮತ್ತು ಶ್ರೀಮತಿ ಗೊರೂರು ವಸಂತಿಮೂರ್ತಿ ರವರನ್ನು ಟೈಮ್ಸ್ ಪಿಯು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಗಾಯಕ ಗೊರೂರು ಶ್ರೀಕಾಂತ್ ಪ್ರಾರ್ಥಿಸಿದರು. ಕಲಾವಿದ ಯಾಕೂಬ್ ಗೊರೂರು, ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ಶೈಲಜಾ ರೈ, ಗೊರೂರರ ಸಹೋದರನ ಪುತ್ರಿ ಶ್ರೀಮತಿ ಪದ್ಮ ವಿಜಯಸಾರಥಿ, ಗೊರೂರರ ತಮ್ಮಂದಿರ ಸೊಸೆಯರು ರೇವತಿ ಮೂರ್ತಿ ಮತ್ತು ಜಯಂತಿ ರಘುರಾಮ್ ಉಪಸ್ಥಿತರಿದ್ದರು. ಉಪನ್ಯಾಸಕರು ಅರವಿಂದ್ ಸ್ವಾಗತಿಸಿದರು.