ಬಳ್ಳಾರಿ : ತಾಲೂಕಿನ ಯರಗುಡಿ ಗ್ರಾಮ ಪಂಚಾಯತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ - ಗ್ರಾಮೀಣ ಯೋಜನೆಯ ವ್ಯಾಪಕ ಪ್ರಚಾರ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ ಹಾಗೂ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಬಾರಕೆರ್ ಅವರು ಬುಧವಾರ ಚಾಲನೆ ನೀಡಿದರು.
ಗ್ರಾಮ ಪಂಚಾಯತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಯೋಜನೆಯ ಮುಖ್ಯ ಉದ್ದೇಶಗಳು, ಲಭ್ಯವಿರುವ ಸೌಲಭ್ಯಗಳು ಹಾಗೂ ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರತಿಯೊಬ್ಬ ಅರ್ಹರು ವೈಯಕ್ತಿಕ ಕಾಮಗಾರಿಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಜಾಗೃತಿ ಮೂಡಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಡಂಗೂರ ಹಾಗೂ ಆಟೋ ಮೂಲಕ ಪ್ರಚಾರ ನಡೆಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕನಿಷ್ಠ 500 ಕೂಲಿಕಾರ್ಮಿಕರಿಗೆ ಕಡ್ಡಾಯವಾಗಿ ಉದ್ಯೋಗ ಕಲ್ಪಿಸಬೇಕು ಎಂದು ಪಿಡಿಓರವರಿಗೆ ಸೂಚಿಸಿದರು.

ಕಾಮಗಾರಿ ಸ್ಥಳಕ್ಕೆ ಭೇಟಿ ಹಾಗೂ ಸಂವಾದ:
ಸಭೆಯ ನಂತರ ಅಧಿಕಾರಿಗಳ ತಂಡವು ಯರಗುಡಿ ಪಂಚಾಯತಿ ವ್ಯಾಪ್ತಿಯ ಬೆಣಕಲ್ಲು ಗ್ರಾಮದಲ್ಲಿ ಜಾರಿಯಲ್ಲಿರುವ ನಾಲಾ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕೂಲಿಕಾರರೊಂದಿಗೆ ನೇರ ಸಂವಾದ ನಡೆಸಿದ ಉಪಕಾರ್ಯದರ್ಶಿಯವರು, ಯೋಜನೆಯಡಿ ಕೈಗೊಳ್ಳಬಹುದಾದ 318 ವಿವಿಧ ಕಾಮಗಾರಿಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್. ಕೆ. ಬಸವರಾಜ್, ಯರಗುಡಿ ಗ್ರಾಪಂ ಪಿಡಿಒ ರುದ್ರಪ್ಪ, ಜಿಲ್ಲಾ ಐಇಸಿ ಸಂಯೋಜಕ ನಟರಾಜ್, ತಾಂತ್ರಿಕ ಸಂಯೋಜಕ ವಿಜಯಮಹಾಂತೇಶ, ತಾಲೂಕು ಐಇಸಿ ಸಂಯೋಜಕ ರಮೇಶ, ತಾಂತ್ರಿಕ ಸಹಾಯಕಿ ನವ್ಯ ಶೃತಿ, ಡಿಇಒ, ಬಿಎಫ್ಟಿ, ಜಿಕೆಎಂ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.