ಬಳ್ಳಾರಿ: ಅಸ್ಸಾಂ ರಾಜ್ಯದ ಗುವಾಹಟಿಯ ಬೋಗೆಶ್ವರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 24ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡದ ಕರಾಟೆ ಪಟುಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವರ್ಲ್ಡ್ ಟ್ರಡಿಷನಲ್ ಶೋಟೋಕನ್ ಕರಾಟೆ ಫೆಡರೇಷನ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ನೂರಾರು ಕರಾಟೆ ಪಟುಗಳು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಟ್ರಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿ ಕರ್ನಾಟಕದ ಪರವಾಗಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕರಾಟೆಪಟುಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ವಿಶೇಷವಾಗಿ ತೋರಣಗಲ್ ಜಿಂದಾಲ್ ವಿದ್ಯಾಮಂದಿರದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
12 ವರ್ಷದ ವಯೋಮಿತಿಯ ಕುಮಿತೆ ವಿಭಾಗದಲ್ಲಿ ಯಶ್ ರಾಜ್ ದ್ವಿತೀಯ ಸ್ಥಾನ ಪಡೆದರೆ, 11 ವರ್ಷದ ಕುಮಿತೆ ವಿಭಾಗದಲ್ಲಿ ಅಕ್ಷೂಭ್ಯಾ ತೃತೀಯ ಸ್ಥಾನ ಗಳಿಸಿದ್ದಾರೆ. 10 ವರ್ಷದ ಕುಮಿತೆ ವಿಭಾಗದಲ್ಲಿ ಸಾಗರ್ ಕವಾಸಿ ದ್ವಿತೀಯ ಸ್ಥಾನ ಪಡೆದಿದ್ದು, 9 ವರ್ಷದ ಕುಮಿತೆಯಲ್ಲಿ ರಿಹಾನ್ ಠಾಕೂರ್ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
8 ವರ್ಷದ ಕುಮಿತೆ ವಿಭಾಗದಲ್ಲಿ ಮಿನೀಷಾ ಮಿಸ್ತ್ರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 15 ವರ್ಷ ಮೇಲ್ಪಟ್ಟ ಗ್ರೂಪ್ ಕಟಾ ವಿಭಾಗದಲ್ಲಿ ಪೀಸಾ ಅನುಪ್, ಕೊಮಟ್ಟಿ ವರುಣ್ ಬಾಬು ಹಾಗೂ ಸರಸ್ವತಿ ಕುಲಕರ್ಣಿ ತಂಡ ತೃತೀಯ ಸ್ಥಾನ ಪಡೆದು ಕರ್ನಾಟಕ ತಂಡದ ಸಾಧನೆಯನ್ನು ಮತ್ತಷ್ಟು ಮೆರೆದಿದೆ.
10 ವರ್ಷದ ಕುಮಿತೆ ವಿಭಾಗದಲ್ಲಿ ಧನೀಶ್ ರೆಡ್ಡಿ ದ್ವಿತೀಯ ಸ್ಥಾನ ಪಡೆದರೆ, 13 ವರ್ಷದ ಕುಮಿತೆ ವಿಭಾಗದಲ್ಲಿ ಬಿಂದಿಯಾ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅದೇ ವಿಭಾಗದಲ್ಲಿ ಅನ್ಮೋಲ್ ಕುಮಾರ್ ತೃತೀಯ ಸ್ಥಾನ ಪಡೆದಿದ್ದಾರೆ.
16 ವರ್ಷದ ಕುಮಿತೆ ವಿಭಾಗದಲ್ಲಿ ಆನಂದ್ ಕವಾಸಿ ತೃತೀಯ ಸ್ಥಾನ ಪಡೆದಿದ್ದು, 18 ವರ್ಷದ ಕಟಾ ವಿಭಾಗದಲ್ಲಿ ಸರಸ್ವತಿ ಕುಲಕರ್ಣಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. 13 ವರ್ಷದ ಕುಮಿತೆ ವಿಭಾಗದಲ್ಲಿ ರೇವಂತ್ ರೆಡ್ಡಿ ತೃತೀಯ ಸ್ಥಾನ ಪಡೆದಿದ್ದಾರೆ.
15 ವರ್ಷದ ಕುಮಿತೆ ವಿಭಾಗದಲ್ಲಿ ಸೂರ್ಯ ದರ್ಶಿನಿ ತೃತೀಯ ಸ್ಥಾನ ಪಡೆದಿದ್ದು, 21 ವರ್ಷದ ಕುಮಿತೆ ವಿಭಾಗದಲ್ಲಿ ನವೀನ ಕೆ. ತೃತೀಯ ಸ್ಥಾನ ಗಳಿಸಿದ್ದಾರೆ. 35 ವರ್ಷದ ವಯೋಮಿತಿಯ ಕುಮಿತೆ ಹಾಗೂ ಕಟಾ ವಿಭಾಗಗಳಲ್ಲಿ ಕೊಂಡಯ್ಯ ದ್ವಿತೀಯ ಸ್ಥಾನ ಪಡೆದು ಹಿರಿಯ ಸ್ಪರ್ಧಿಗಳ ವಿಭಾಗದಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕರಾಟೆಪಟುಗಳು ತೋರಿದ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ವಿಜೇತ ಎಲ್ಲಾ ಕರಾಟೆಪಟುಗಳನ್ನು ಟ್ರಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿಯ ಸಂಸ್ಥಾಪಕರಾದ ಹಿರಿಯ ಕರಾಟೆ ತರಬೇತುದಾರ ಕಟ್ಟೆ ಸ್ವಾಮಿ, ಅಕಾಡೆಮಿಯ ತಾಂತ್ರಿಕ ನಿರ್ದೇಶಕರಾದ ಸುಭಾಷ್ ಚಂದ್ರ, ಜಿಂದಾಲ್ ವಿದ್ಯಾಮಂದಿರದ ಪ್ರಾಂಶುಪಾಲರು, ಕ್ರೀಡಾ ಆಡಳಿತಾಧಿಕಾರಿಗಳು ಹಾಗೂ ಕರಾಟೆ ತರಬೇತುದಾರರಾದ ಜಡೇಶ್, ನಾಗರಾಜ್ ದಾಸರ್, ಹುಲುಗಣ್ಣ ಆನಂದ್, ಹನುಮಂತ, ನಬಿ ಸಾಹೇಬ, ಪ್ರಸಾದ್, ರಜತ್ ನಾಗರಾಜ್, ಗುರುನಾಥ್, ಮಾರೇಶ್ ಪ್ರಕಾಶ್, ಪ್ರಶಾಂತ್ ಸೋಮಶೇಖರ್, ಕುಮಾರಸ್ವಾಮಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.