ಬಳ್ಳಾರಿ: ವಿದ್ಯಾರ್ಥಿಗಳ ಜೀವನದಲ್ಲಿ ಆರೋಗ್ಯ ಮತ್ತು ಕ್ರೀಡಾಸ್ಫೂರ್ತಿಗೆ ಮಹತ್ವದ ಸ್ಥಾನವಿದ್ದು, ದೈಹಿಕವಾಗಿ ಸದೃಢರಾಗಿದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ಹೇಳಿದರು.
ನಗರದ ಕಾಲೇಜು ಆವರಣದಲ್ಲಿ 2025–26ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಎರಡು ದಿನಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಗಳು ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡಭಾವನೆ ಬೆಳೆಸುತ್ತವೆ ಎಂದು ಹೇಳಿದರು.

ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಗಣೇಶ್ ಮತ್ತು ಆಕಾಶ್ ಜೋಡಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ವಿರೇಂದ್ರ ಮತ್ತು ದುರ್ಗಾಪ್ರಸಾದ್ ದ್ವಿತೀಯ ಸ್ಥಾನ ಪಡೆದರೆ, ಮಣಿಕಂಠ ಮತ್ತು ಮಂಜುನಾಥ ತೃತೀಯ ಸ್ಥಾನ ಗಳಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಧರ್ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದರು. ಮಂಜುನಾಥ ದ್ವಿತೀಯ ಹಾಗೂ ಅಭಿಷೇಕ್ ತೃತೀಯ ಸ್ಥಾನ ಪಡೆದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಎಂ. ಭಾರತೀ ಮತ್ತು ಬಸೀರುನ್ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು. ಕೆ. ಕಾವ್ಯ ಮತ್ತು ಸೌಮ್ಯ ದ್ವಿತೀಯ ಸ್ಥಾನ ಪಡೆದರೆ, ಲಾವಣ್ಯ ಮತ್ತು ನಾಸ್ರಿನ್ ತೃತೀಯ ಸ್ಥಾನ ಗಳಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಮುಡಿಗೇರಿಸಿಕೊಂಡರು. ಪಿ. ಬಸೀರುನ್ ದ್ವಿತೀಯ ಸ್ಥಾನ ಪಡೆದರು.

ಪಂದ್ಯಾವಳಿಯ ಫೈನಲ್ ಸ್ಪರ್ಧೆಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಟಿ. ದೊಡ್ಡಬಸವರಾಜ್, ಆಡಳಿತ ವಿಭಾಗದ ವ್ಯವಸ್ಥಾಪಕ ಯುವರಾಜ್ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಹಾಜರಿದ್ದು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ, ಉಪನ್ಯಾಸಕ ಚಂದ್ರಶೇಖರ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಗಿರೀಶ್ ಕುಮಾರ್ ಜಿ, ಹಿಂದಿ ಉಪನ್ಯಾಸಕ ಸಂತೋಷ ಕುಮಾರ್ ಚೌಹಾಣ್, ದೈಹಿಕ ಶಿಕ್ಷಣದ ಉಪನ್ಯಾಸಕ ಶಂಭುಲಿಂಗಯ್ಯ ಸ್ವಾಮಿ, ಬೋಧಕೇತರ ಸಿಬ್ಬಂದಿ ಹನುಮಂತು ಸೇರಿದಂತೆ ಹಲವರು ಉಪಸ್ಥಿತರಿದ್ದರು.