ಕೊಪ್ಪಳ : ವೇಗವಾಗಿ ಬಂದ ಟಿಪ್ಪರ್ ತಪ್ಪಿಸಿ ಕಂಟೇನರ್ ಒಂದು ಟ್ರ್ಯಾಕ್ಟರ್ ಗೆ ರಭಸದಿಂದ ಹಿಂಬದಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರಲ್ಲಿದ್ದವರಲ್ಲಿ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಕೊಪ್ಪಳ- ಹೊಸಪೇಟೆ ಸರಹದ್ದು ರಾಷ್ಟ್ರೀಯ ಹೆದ್ದಾರಿ 50 ರ ಕೆಳ ಸೇತುವೆ ಬಳಿ ಶುಕ್ರವಾರ ಜರುಗಿದೆ

ಹೌದು! ಶುಕ್ರವಾರ ಹಿನ್ನೆಲೆ ಹಾಗೂ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಆರಾಧ್ಯದೇವಿ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ಕೂಡ್ಲಿಗಿಯಿಂದ ಒಂದೇ ಕುಟುಂಬದ ಸುಮಾರು 19 ಜನರು ಟ್ರ್ಯಾಕ್ಟರ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಊರಿಂದ ಹೊರಟಿ ದ್ದರು, ಮಧ್ಯಾಹ್ನ 2:30 ಸುಮಾರಿಗೆ ಹೊಸ ಪೇಟೆ ಸರ ಹದ್ದು ದಾಟಿ, ಕೊಪ್ಪಳ ಸರಹದ್ದು ಪ್ರವೇಶಿಸಿದ ಮೂರು ಮೀಟರ್ ದೂರದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಆರು ಜನರು ಸಾವನ್ನಪ್ಪಿದ ಅಪಘಾತ ಜರುಗಿದೆ.
ಇನ್ನೇನು ಹುಲಿಗೆಮ್ಮ ದೇವಿ ದೇವಸ್ಥಾನ ಕೇವಲ ನಾಲ್ಕೈದ ಕಿ.ಲೋ ದೂರದಲ್ಲಿತ್ತು. ಟ್ರ್ಯಾಕ್ಟರ್ನಲ್ಲಿ ಹೊರಟಿದ್ದವರು ಹುಲಿಗೆಮ್ಮ ದೇವಿ ನಿನಗೆ ಉಧೋ...ಉಧೋ ಎಂದು ಭಕ್ತಿಯಿಂದ ನಮಿಸುತ್ತಿರುವಾಗ ಯಮಧೂತನಂತೆ ಬಂದ ಬೃಹತ್ ಆಕಾರದ ಕೋರಿಯರ್ ಕಂಟೇನರ್ ವಾಹನ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ರಭಸವಾಗಿ ಗುದ್ದಿದೆ. ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಡಿವೈಡರ್ ಹತ್ತಿ ನೇರವಾಗಿ ಹೊಸಪೇಟೆ ಹಾಗೂ ಕೊಪ್ಪಳ ಸರಹದ್ದು ಬಳಿಯ ಎರಡನೇ ಕೆಳ ಸೇತುವೆಗೆ ಉರುಳಿದೆ.

ಟ್ರ್ಯಾಕ್ಟರ್ ನಲ್ಲಿದ್ದ 19 ಜನರಲ್ಲಿ ಆರು ಜನರ ಪ್ರಾಣ ಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿದೆ. ಉಳಿದವರಿಗೆ ಗಂಭೀರಗಾಯಗಳಾಗಿವೆ. ಮಾಹಿತಿ ತಿಳಿದ ಹಾಗೂ ಹುಲಿಗೆಮ್ಮ ದೇವಿ ಬಂದೋಬಸ್ತ್ ನಲ್ಲಿದ್ದ ಡಿವೈಎಸ್ಪಿ ಮುತ್ತಣ್ಣ ಸವರಗೊಳ ಹಾಗೂ ಮುನಿರಾಬಾದ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಸಾವನ್ನಪ್ಪಿದವರನ್ನು ಹೊರತೆಗೆದು ಹೊಸಪೇಟೆ ಶವಗಾರಕ್ಕೆ ರವಾನೆ ಮಾಡಿದ್ದು, ಗಾಯಳುಗಳನ್ನು ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸಂಡೂರು ತಾಲೂಕಿನ ಯಶವಂತ ನಗರ ಹಾಗೂ ಕೂಡ್ಲಿಗಿ ತಾಲೂಕಿನ ಮಲ್ಲಾರಹಳ್ಳಿ ಗ್ರಾಮದ ಕೆಂಚಪ್ಪ (೪೫), ಮಹಾಂತೇಶ್ (೧೮) ಭರತ್ (೦೧) ಮಂಜಮ್ಮ (೪೨), ಮಾಯಾ (೧೬) ಗೀತಾ ಹಾಗೂ ಗೌರಮ್ಮ ಎನ್ನುವವರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರೇಣುಕಮ್ಮ, ಅರುಣಮ್ಮ, ಚೇತನ, ಅಂಜಲಿ, ಅರ್ಜುನ, ರತ್ನಮ್ಮ ಅಜಯ, ಮಾಯ ಸೇರಿದಂತೆ ೧೩ ಜನರಿಗೆ ಗಾಯಗಳಾಗಿದ್ದು, ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳ ರವಾನೆ ಮಾಡಲಾಗಿದ್ದು, ಹೊಸಪೇಟೆ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಟಿಪ್ಪರ್ ತಪ್ಪಿಸಿ ಕಂಟೇನರ್ ಹಿಂಬದಿಯಿಂದ ಗುದ್ದಿದ ರಭಸಕ್ಕೆ ಸೇತುವೆ ಕೆಳಗಡೆ ಟ್ರ್ಯಾಕ್ಟರ್ ಉರುಳಿದೆ. KA35, TB7461 ಟ್ರ್ಯಾಕ್ಟರ್ ಗೆ, KA1, AQ 1604
ಕಂಟೇನರ್ ವಾಹನ ಗುದ್ದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಹಾಗೂ ಹೊಸಪೇಟೆ ಎಸ್ಪಿ ಜಾಹ್ನವಿ ಅವರು ಭೇಟಿ ಅಪಘಾತ ಭೀಕರತೆಯನ್ನು ಪರಿಶೀಲಿಸಿದ್ದಾರೆ. ಇನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಸಂಸದ ಈ. ತುಕಾರಾಂ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.

ದಾವಣಗೆರೆ, ಸಂಡೂರಿನಿಂದ ಕೂಡ್ಲಿಗಿ ಬಂದು ಅಲ್ಲಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದರು.. ಈ ವೇಳೆ ಹಿಂದಿನಿಂದ ಬಂದ ಕಂಟೇನರ್ ವಾಹನ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಘಟನೆಯಲ್ಲಿ ಟ್ರ್ಯಾಕ್ಟರ್ ಡ್ರೈವರ್ ಸಹಿತ ಏಳು ಜನ ಸಾವನ್ನಪ್ಪಿದ್ದಾರೆ. ಒಟ್ಟು ೧೯ ಜನ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನ ಹೊಸಪೇಟೆ ಕೊಪ್ಪಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ನಾಲ್ಕು ಜನ ಹೊಸಪೇಟೆ, ೯ ಜನ ಕೊಪ್ಪಳ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಾವನ್ನಪ್ಪಿದವರಿಗೆ ಸಿಎಂ ಜೊತೆ ಚರ್ಚಿಸಿ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಸಂಸದ ಈ.ತುಕಾರಾಂ ಭರವಸೆ ನೀಡಿದ್ದಾರೆ.
ಐಜಿಪಿ ಮಾಹಿತಿ: ”ಟ್ರ್ಯಾಕ್ಟರ್ನಲ್ಲಿ 19 ಜನರು ಕೊಪ್ಪಳದ ಹುಲಿಗೆಮ್ಮನ ದರ್ಶನಕ್ಕೆ ಹೊರಟಿದ್ದರು. ಹೊಸಪೇಟೆ-ಮುನಿರಾಬಾದ್ ಗಡಿ ಬಳಿ ತೆರಳುತ್ತಿದ್ದಾಗ ಟ್ಯಾಂಕರ್ ಲಾರಿಯು ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ಟ್ರ್ಯಾಕ್ಟರ್, ಚಾಲಕನ ನಿಯಂತ್ರಣ ಕಳೆದುಕೊಂಡು ಸೇತುವೆ ಮೇಲಿಂದ ಬಿದ್ದಿದೆ. 6 ಜನ ಮೃತಪಟ್ಟಿದ್ದು, ಗಾಯಗೊಂಡ 9 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ರವಾನಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ನಾಲ್ವರಿಗೆ ಹೊಸಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ಯಾಂಕರ್ ಚಾಲಕನ್ನು ವಶಕ್ಕೆ ಪಡೆಯಲಾಗಿದೆ” ಎಂದು ಐಜಿಪಿ ಡಾ.ಹರ್ಷ ಮಾಹಿತಿ ನೀಡಿದರು.

೫ ಲಕ್ಷ ರೂ. ಪರಿಹಾರ: ”ಇದೊಂದು ದುರದೃಷ್ಟಕರ ಘಟನೆಯಾಗಿದೆ. ಸಂಸದ ತುಕಾರಾಂ ಅವರು ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಯವರು ಮೃತರ ಕುಟುಂಬಗಳಿಗೆ ೫ ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಗಾಯಾಳುಗಳ ವೆಚ್ಚ ಭರಿಸಲಾಗುವುದು” ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.