ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮೂಲಕ ದೇಶದಲ್ಲಿ ಎರಡನೇ ಮೂರರಷ್ಟು ಅಧಿಕಾರದ ಬಲ ಪಡೆದು, ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಸಂಚು ರೂಪಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಜನರ ಮನಸ್ಸನ್ನು ಗೆದ್ದು ನೇರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಎಸ್ಐಆರ್ ಮೂಲಕ ಕೆಲ ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಿಕೊಂಡಿದೆ. ಇದೇ ರೀತಿ ಎರಡನೇ ಮೂರರಷ್ಟು ಬಲಾಬಲವನ್ನು ಕ್ರೂಢಿಕರಿಸಿಕೊಂಡು ನಂತರ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಎಚ್ಚರಿಸಿದರು.
ಬಿಜೆಪಿ ದೇಶದಲ್ಲಿ ಜೆಡಿಯು, ಅಕಾಲಿಕ ದಳ, ಶಿವಸೇನೆ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ವಿಭಜಿಸಿ, ತನ್ನ ಬೇಳೆ ಬೇಯಿಸಿಕೊಂಡಿದೆ. ಕರ್ನಾಟಕದಲ್ಲಿ ಜೆಡಿಎಸ್ ಮಾತ್ರ ಪ್ರಾದೇಶಿಕವಾಗಿ ಉಳಿದುಕೊಂಡಿದೆ. ಈಗ ಬಿಜೆಪಿಯವರು ಅದರ ಮೇಲೂ ಕಣ್ಣಿಟ್ಟಿದ್ದಾರೆ ಎಂದು ಹೇಳಿದರು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ, ಪ್ರಹ್ಲಾದ್ ಜೋಷಿ ಅವರ ಜೊತೆ ಹೋಗುವಂತಹ ದುಃಸ್ಥಿತಿ ಬರಬಾರದಿತ್ತು. ಈ ಹಿಂದೆ ಇದೇ ಕುಮಾರಸ್ವಾಮಿ ಅವರು, ಜೋಷಿ ಅವರ ಬಗ್ಗೆ ಏನೆಂದು ಟೀಕೆ ಮಾಡಿದ್ದರು ಎಂಬುದನ್ನು ನಾನು ನೆನಪಿಸಲು ಬಯಸುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯವರು, ಕುಮಾರಸ್ವಾಮಿ ಅವರನ್ನು ದಾಳವನ್ನಾಗಿ ಬಳಿಸಿ, ಬಲಿಪಶು ಮಾಡುತ್ತಿದ್ದಾರೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿರುವ 5.65ಕೋಟಿ ಮತದಾರರ ಪಟ್ಟಿ ಮ್ಯಾಪಿಂಗ್ ಆಗದೇ ಇರುವ 50 ಲಕ್ಷ ಜನರಿದ್ದಾರೆ. ಅವರನ್ನು ಕೈ ಬಿಡುವ ಹುನ್ನಾರ ನಡೆದಿದೆ. ರಾಮನಗರದ ಮಸೀದಿ ಅಥವಾ ಇತರ ಕಡೆಗಳಲ್ಲಿ ಎಸ್ಐಆರ್ ಪ್ರಕ್ರಿಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿವೆ. ಜನ ಪ್ರಾತಿನಿದ್ಯ ಕಾಯ್ದೆಯಡಿ ಜಲವಸತಿ ಶ್ರೀಯೋಭಿವೃದ್ಧಿ ಸಂಘಗಳು, ಚರ್ಚ್, ಮಸೀದಿಯಂತಹ ಧಾರ್ಮಿಕ ಆವರಣದಲ್ಲಿ ಜಾಗೃತಿ ಮೂಡಿಸಲು ಅವಕಾಶ ಇದೆ.
ಆಯೋಗ ನೀಡಿರುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡಲು ಪದವಿದಾರರಿಗೆ ಭರ್ತಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮಸೀದಿಗಳಲ್ಲಿ, ದೇವಸ್ಥಾನಗಳಲ್ಲಿ ಅರ್ಜಿ ಭರ್ತಿ ಮಾಡುವ ಪ್ರಕ್ರಿಯೆಗಳಾಗಿರಬಹುದು ಇದು ತಪ್ಪಲ್ಲ ಎಂದರು.
ಈ ಹಿಂದೆ ಬಿಜೆಪಿಯವರು ಚುನಾವಣೆ ಗೆಲ್ಲಲು ನಾನಾ ರೀತಿಯ ಹುನ್ನಾರ ನಡೆಸಿದ್ದರು. ಸಿಎಎ, ಎನ್ಆರ್ಸಿ ಸೇರಿದಂತೆ ಹಲವಾರು ಕುತಂತ್ರ ನಡೆಸಿದ್ದರು. ಅದು ಸಾಧ್ಯವಾಗಲಿಲ್ಲ. ಈಗ ಎಸ್ಐಆರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ಕುತಂತ್ರ, ಷಡ್ಯಂತ್ರ ಹುನ್ನಾರಗಳ ಮುಖಾಂತರ ಎರಡನೇ ಮೂರರಷ್ಟು ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ದೇಶದಲ್ಲಿ ನೆಲೆಸಿರುವವರೆಲ್ಲಾ ಇಲ್ಲಿನ ಪ್ರಜೆಗಳು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜ್ಯದಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಪ್ರಹ್ಲಾದ್ ಜೋಷಿ, ನಿತಿನ್ ಗಡ್ಕರಿಯಿಂದ ಪಾಠ ಕಲಿಯಲಿ ಎಂದು ತಿಳಿ ಹೇಳಿದರು.ಎಸ್ಐಆರ್ ಬಗ್ಗೆ ಬಿಜೆಪಿಯಲ್ಲೇ ಗೊಂದಲಗಳಿವೆ. ಪ್ರಹ್ಲಾದ್ ಜೋಷಿ ಕ್ಷುಲ್ಲಕ ರಾಜಕಾರಣ ಮಾಡುವುದು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೆಂದ್ರದಿಂದ ನೆರವು ಕೊಡಿಸುವ ಪ್ರಯತ್ನ ಮಾಡಲಿ ಎಂದು ತಿರುಗೇಟು ನೀಡಿದರು.