ಹೈವೇಯ ಬದಿಯಲ್ಲಿ ದೇಶಪ್ರೇಮ ಮಾರಾಟಕ್ಕಿದೆ,
ಟೋಲ್ಗೇಟ್ ಬಳಿ ದೇಶಪ್ರೇಮ ಮಾರಾಟಕ್ಕಿದೆ;
ಅಂಗಡಿಯೊಳಗೆ,
ಅಂಗಡಿ ಮುಂಗಟ್ಟಿನಲ್ಲಿ,
ಬೀದಿಯ ಬದಿಯಲ್ಲಿ,
ರಸ್ತೆ ತಿರುವಿನಲ್ಲಿ...
ತ್ರಿವರ್ಣದ ಬಣ್ಣಗಳಲ್ಲಿ
ದೇಶಪ್ರೇಮ ನೇತಾಡುತ್ತಿದೆ!
ವಿಧಾನಸೌಧದ ಮುಂದೆ ಮಾರಾಟಕ್ಕಿದೆ,
ಲಾಲ್ಬಾಗ್ನ ಬಳಿಯೂ ಮಾರಾಟಕ್ಕಿದೆ;
ನಗರದ ಮೂಲೆ-ಮೂಲೆಗಳಲ್ಲಿ,
ಹಳ್ಳಿಯ ದಾರಿ-ದಾರಿಗಳಲ್ಲಿ...
ಕೈಯಲ್ಲಿ ಧ್ವಜ ಹಿಡಿದು
“ತೆಗೆದುಕೊಳ್ಳಿ ಸಾರ್…” ಎಂಬ ಕೂಗು!
ಪುಟ್ಟ ಮಕ್ಕಳ ಕೈಯಲ್ಲಿ ಧ್ವಜವಿದೆ,
ದೊಡ್ಡವರ ಕೈಯಲ್ಲಿ ಬ್ಯಾಡ್ಜ್ಗಳಿವೆ;
ವಯಸ್ಸಾದವರ ಮಡಚಿದ ಕೈಯಲ್ಲಿ
ತ್ರಿವರ್ಣದ ಪುಟ್ಟ ಕಾಗದವಿದೆ;
ಹೆಣ್ಣುಮಕ್ಕಳ ಕೈಯಲ್ಲಿ ರಿಬ್ಬನ್ಗಳಿವೆ,
ಬಡವರ ಕಣ್ಣಲ್ಲಿ ಮಾತ್ರ
ಮಾರಾಟದ ನಿರೀಕ್ಷೆಯಿದೆ!
ಕೇಸರಿ ಮಾರಾಟಕ್ಕಿದೆ,
ಬಿಳಿ ಮಾರಾಟಕ್ಕಿದೆ,
ಹಸಿರು ಮಾರಾಟಕ್ಕಿದೆ;
ಅಶೋಕ ಚಕ್ರವೂ ಮಾರಾಟಕ್ಕಿದೆ...
ಎದೆಯ ಮೇಲೆ ಅಂಟಿಸಿಕೊಳ್ಳಲು
ದೇಶಭಕ್ತಿಯ ಚಿಹ್ನೆಯೂ ಮಾರಾಟಕ್ಕಿದೆ!
ಒಂದು ಧ್ವಜಕ್ಕೆ ಹತ್ತು ರೂಪಾಯಿ,
ಒಂದು ಬ್ಯಾಡ್ಜಿಗೆ ಐದು ರೂಪಾಯಿ;
ದೇಶಪ್ರೇಮಕ್ಕೆ ಬೆಲೆ ನಿಗದಿಯಾಗಿದೆ,
ಆದರೆ…
ಈ ಮಣ್ಣಿಗಾಗಿ ರಕ್ತ ಸುರಿಸಿದ
ವೀರರ ತ್ಯಾಗಕ್ಕೆ ಬೆಲೆ ಎಷ್ಟು?
ಸ್ವಾತಂತ್ರ್ಯಕ್ಕಾಗಿ ಸೆರೆಮನೆ ಸೇರಿದ
ಆ ಜೀವಗಳ ಕನಸಿಗೆ ಬೆಲೆ ಎಷ್ಟು?
ಕಾರಿನ ಗಾಜು ಇಳಿಯುತ್ತದೆ,
ಒಂದು ಕೈ ಹೊರಗೆ ಬರುತ್ತದೆ;
ಧ್ವಜವೊಂದನ್ನು ಕೊಂಡು
ಮತ್ತೆ ಗಾಜು ಮೇಲಕ್ಕೆ ಏರುತ್ತದೆ.
ಕ್ಷಣಕಾಲ ಕಾರಿನೊಳಗೆ
ದೇಶಭಕ್ತಿ ಹಾರಾಡುತ್ತದೆ;
ಆಮೇಲೆ?
ಮುಂದಿನ ಸಿಗ್ನಲ್ನಲ್ಲಿ
ಮತ್ತೊಂದು ಧ್ವಜ ಮಾರಾಟಕ್ಕಿದೆ!
ಮಗು ಓಡುತ್ತದೆ…
“ಸಾರ್, ಒಂದು ಧ್ವಜ ತಗೊಳ್ಳಿ…”
ಎಂದು ಕೇಳುತ್ತದೆ;
ಕಾರಿನೊಳಗಿನ ಮಗು
ಅದನ್ನು ನೋಡಿ ನಗುತ್ತದೆ...
ಆದರೆ ಕಾರಿನ ಹೊರಗಿನ ಮಗು
ಆ ದಿನದ ಊಟಕ್ಕಾಗಿ
ಧ್ವಜ ಮಾರುತ್ತದೆ!
ಇದು ಕೇವಲ ಧ್ವಜದ ವ್ಯಾಪಾರವಲ್ಲ,
ಇದು ನಮ್ಮ ಸಮಾಜದ ಚಿತ್ರ;
ಒಬ್ಬನಿಗೆ ದೇಶಭಕ್ತಿ
ಕಾರಿನ ಡ್ಯಾಶ್ಬೋರ್ಡಿನ ಅಲಂಕಾರ,
ಮತ್ತೊಬ್ಬನಿಗೆ
ಅದೇ ದೇಶಭಕ್ತಿ
ಇಂದಿನ ಹೊಟ್ಟೆಯ ಹಸಿವಿನ ಆಧಾರ!
ಆದರೂ ಆ ಪುಟ್ಟ ಕೈಗಳು
ಭಾರತವನ್ನೇ ಮಾರುತ್ತಿಲ್ಲ…
ಅವು ತೋರಿಸುತ್ತಿವೆ...
ದೇಶವನ್ನು ಪ್ರೀತಿಸುವ ಹಕ್ಕು
ಬಡವನಿಗೂ ಇದೆ ಎಂದು!
ಧ್ವಜವನ್ನು ಕೊಳ್ಳಿರಿ,
ಚಿಹ್ನೆಯನ್ನು ಕೊಳ್ಳಿರಿ,
ಆದರೆ ಒಂದು ಕ್ಷಣ
ಅದನ್ನು ಮಾರುವ ಕೈಯನ್ನೂ ನೋಡಿ…
ಅಲ್ಲಿ ಕೇವಲ ವ್ಯಾಪಾರವಿಲ್ಲ,
ಒಂದು ಕುಟುಂಬದ ಬದುಕಿದೆ;
ಒಂದು ಮಗುವಿನ ಹಸಿವಿದೆ;
ಒಬ್ಬ ತಾಯಿಯ ನಿರೀಕ್ಷೆಯಿದೆ;
ಒಬ್ಬ ವೃದ್ಧನ ಬೆವರಿದೆ;
ಒಬ್ಬ ಬಡವನ ಬದುಕಿನ ಹೋರಾಟವಿದೆ!
ಹೌದು…
ಹೈವೇಯಲ್ಲಿ ದೇಶಪ್ರೇಮ ಮಾರಾಟಕ್ಕಿದೆ,
ಟೋಲ್ಗೇಟ್ನಲ್ಲಿ ದೇಶಪ್ರೇಮ ಮಾರಾಟಕ್ಕಿದೆ,
ಅಂಗಡಿ ಮುಂಗಟ್ಟಿನಲ್ಲಿ ದೇಶಪ್ರೇಮ ಮಾರಾಟಕ್ಕಿದೆ,
ವಿಧಾನಸೌಧದ ಮುಂದೆ ದೇಶಪ್ರೇಮ ಮಾರಾಟಕ್ಕಿದೆ,
ಲಾಲ್ಬಾಗ್ನ ಬಳಿ ದೇಶಪ್ರೇಮ ಮಾರಾಟಕ್ಕಿದೆ,
ಬೀದಿ ಬದಿಯಲ್ಲಿ ದೇಶಪ್ರೇಮ ಮಾರಾಟಕ್ಕಿದೆ…
ಆದರೆ ಒಂದು ಪ್ರಶ್ನೆ ಮಾತ್ರ
ಇನ್ನೂ ಮಾರಾಟಕ್ಕಿಲ್ಲ...
“ನಿಜವಾದ ದೇಶಪ್ರೇಮಕ್ಕೆ ಬೆಲೆ ಎಷ್ಟು?”
ಅದಕ್ಕೆ ಬೆಲೆ ಕಟ್ಟಲು ಆಗೋದಿಇಲ್ಲ…
ಅದು ಕೊಳ್ಳುವುದಲ್ಲ,
ಬದುಕುವುದಾಗಿದೆ! 🇮🇳
ಜೈ ಭಾರತ್!
ವಂದೇ ಮಾತರಂ!
ನಾರಾಯಣ ಸ್ವಾಮಿ ಎ ವಿ
ಶ್ರೀನಿವಾಸಪುರ, ಕೋಲಾರ ಜಿಲ್ಲೆ.
ಮೋ. +918073584433