ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ನಾಡೋಜ ಕವಿ ಡಾ. ಸಿದ್ದಲಿಂಗಯ್ಯನವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರದಾನ ಸಂಚಾಲಕ ಶ್ರೀ ಮಾವಳ್ಳಿ ಶಂಕರ್, ಕಲಾ ನಿಕಾಯ ಡೀನ್ ಪ್ರೊ. ಸೋಮಶೇಖರ್ ಸಿ, ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಹುಗ್ಗಿ, ಶ್ರೀ ತಾಯಪ್ಪ ಸಿಂಗಾಪುರ್, ಶೇಷಾದ್ರಿ ಜಿ.ಸಿ. ಅವರು ಬುದ್ಧ ಮತ್ತು ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಸಿದ್ದಲಿಂಗಯ್ಯನವರ ಬದುಕು ಮತ್ತು ಹೋರಾಟದ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರದಾನ ಸಂಚಾಲಕ ಶ್ರೀ ಮಾವಳ್ಳಿ ಶಂಕರ್ ಅವರು ಡಾ. ಸಿದ್ದಲಿಂಗಯ್ಯನವರು ಕೇವಲ ಕವಿಯಾಗಿರಲಿಲ್ಲ. ಅವರು ದಲಿತ ಚಳವಳಿಯ ಸಾಂಸ್ಕೃತಿಕ ಧ್ವನಿಯಾಗಿದ್ದರು. ಅವರ ಕಾವ್ಯವು ತುಳಿತಕ್ಕೊಳಗಾದವರ ನೋವು ಮತ್ತು ಸಿಟ್ಟನ್ನು ಅಭಿವ್ಯಕ್ತಿಗೊಳಿಸುವ ಶಕ್ತಿಯಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಲಿಂಗಯ್ಯ ಅವರು ರಾಜಕೀಯ ಪಕ್ಷ ಹುಟ್ಟು ಹಾಕಿದ್ದರೆ ಕರ್ನಾಟಕದಲ್ಲಿ ದಲಿತ ಸಮುದಾಯವು ರಾಜ್ಯವನ್ನೇ ಆಳುತ್ತಿತ್ತು. ಅವರು ಮುಖ್ಯಮಂತ್ರಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. 80ರ ದಶಕದಲ್ಲಿ ಶುರುವಾದ ಸೈದ್ದಾಂತಿಕ ಹೋರಾಟ, ಚಳವಳಿಗಳು ಅಧಿಕಾರದ ಗದ್ದುಗೆಯನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ. ಸಿದ್ದಾಂತದ ಹೋರಾಟ ಅಧಿಕಾರವನ್ನು ಪಡೆಯುವ ಮೂಲಕ ತಾರ್ಕಿಕ ಅಂತ್ಯ ಕಾಣಬೇಕಾಗಿತ್ತು ಎಂದು ತಿಳಿಸಿದರು.
ವಿವಿಯ ಕಲಾ ನಿಕಾಯ ಡೀನ್ ಪ್ರೊ. ಸೋಮಶೇಖರ್ ಸಿ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ, ತತ್ವ, ಸಿದ್ದಾಂತ, ಮಾರ್ಗ, ಚಿಂತನೆಗಳನ್ನು ಮೈಗೂಡಿಸಿಕೊಂಡು ಅದೇ ಬದ್ದತೆಯಲ್ಲಿ ಸಿದ್ದಲಿಂಗಯ್ಯ ನವರು ದುಡಿದರು. ಅವರ ಬರಹ, ಚಿಂತನೆ, ಆಲೋಚನೆ ಕ್ರಮ ಜೀವಂತ, ಅವರು ಆರಂಭಿಸಿದ ಹೋರಾಟ ರಾಜ್ಯದ ಚಳವಳಿಯ ದಿಕ್ಕನ್ನೇ ಬದಲಿಸಿದೆ ಎಂದರು.

ತಮ್ಮ ಕ್ರಾಂತಿಕಾರಿ ಬರಹಗಳು ಹಾಗೂ ಭಾಷಣಗಳ ಮೂಲಕ ಸಮಾಜದಲ್ಲಿ ಸಮಾನತೆಯ ಬೆಳಕನ್ನು ಮೂಡಿಸಲು ಶ್ರಮಿಸಿದ ಡಾ. ಸಿದ್ದಲಿಂಗಯ್ಯನವರ ನೆನಪು, ಅವರ ಆದರ್ಶಗಳು ಸದಾ ಕಾಲ ಜೀವಂತ ಸಾಕ್ಷಿ.
ಶ್ರೀ ಮಾವಳ್ಳಿ ಶಂಕರ್, ರಾಜ್ಯ ಪ್ರದಾನ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
ದಲಿತ ಹಾಗೂ ಬಂಡಾಯ ಸಾಹಿತ್ಯದ ಮೂಲಕ ಪ್ರಮುಖ ಧ್ವನಿ, ಜನಪರ ಕವಿ ಡಾ. ಸಿದ್ದಲಿಂಗಯ್ಯನವರು ದಮನಿತರ ಧ್ವನಿಯಾಗಿ, ಸಾಮಾಜಿಕ ಸಮಾನತೆಗಾಗಿ ತಮ್ಮ ಬರಹಗಳ ಮೂಲಕ ದೊಡ್ಡ ಚಳುವಳಿಯನ್ನೇ ಸೃಷ್ಟಿಸಿದ್ದಾರೆ.
- ಪ್ರೊ. ಸೋಮಶೇಖರ್ ಸಿ, ಬೆಂವಿವಿಯ ಕಲಾ ನಿಕಾಯ ಡೀನರು.
ಬೆಂಗಳೂರು ವಿಶ್ವವಿದ್ಯಾಲಯದ ಅಂಗಳದಲ್ಲಿ ಸಿದ್ದಲಿಂಗಯ್ಯನವರು ಕಳೆದ ದಿನಗಳು ಹಾಗೂ ಇಲ್ಲಿನ ವಿದ್ಯಾರ್ಥಿ ಚಳುವಳಿಯ ಮೇಲೆ ಅವರು ಬೀರಿದ ಪ್ರಭಾವ ಅಮೂಲ್ಯವಾದದು.
- ಶೇಷಾದ್ರಿ ಜಿ.ಸಿ, ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು.
ಕವಿ ಸಿದ್ದಲಿಂಗಯ್ಯನವರ ಬದುಕಿನ ಸಂಘರ್ಷಮಯ ಹಾದಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸಾಹಿತ್ಯದ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಗೆ ಮುನ್ನಡಿ ಬರೆದಿದ್ದರು.
ಇದೇ ಸಂದರ್ಭದಲ್ಲಿ ಬೆಂವಿವಿ ಕಲಾ ನಿಕಾಯದ ಡೀನ್ ಪ್ರೊ. ಸೋಮಶೇಖರ್ ಸಿ, ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಹುಗ್ಗಿ, ಶ್ರೀ ತಾಯಪ್ಪ ಸಿಂಗಾಪುರ್, ಡಾ. ಕೊಟ್ರೇಶಪ್ಪ ಸಿ, ಡಾ. ಶೇಖರ್ ವಿ, ಡಾ. ಶಾರದ, ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶೇಷಾದ್ರಿ ಜಿ.ಸಿ, ಅಧ್ಯಕ್ಷ ಪ್ರಶಾಂತ್, ಬೋಧಕೇತರ ಸಿಬ್ಬಂದಿ ಕೊಂಡಲ ರಾವ್, ಗೌರಿ ಶಂಕರ್, ನಾಗರಾಜ, ಸಂಶೋಧನಾರ್ಥಿಗಳಾದ ಚಂದ್ರಪ್ಪ ಎಂ. ಮಿಡ್ಲುಮುನಿ, ಯಲ್ಲಪ್ಪ, ಅಜಿತ್, ನಾಗರಾಜು, ಚೇತನ್ ಬೇಲೂರು, ನಾಗರಾಜ, ರಾಜೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.