ಶಿಕ್ಷಣದ ಮೂಲಕ ಸ್ವಾತಂತ್ರ್ಯವನ್ನು ಸಾಧಿಸಬೇಕು
ಡಾ. ಅಚ್ಯುತ ಸಮಂತ ಅವರ ಬದ್ಧತೆ, ಸ್ಫೂರ್ತಿ ಮಾದರಿ
ಪ್ರಗತಿಶೀಲ ರಾಷ್ಟ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು

ಭುವನೇಶ್ವರ : ಇಲ್ಲಿನ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ-ಡಿಯು) ಹಾಗೂ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್(ಕೆಐಎಸ್ಎಸ್) ನ ವಿವಿಧ ಕ್ಯಾಂಪಸ್ಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಕೆಐಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಸರನ್ಜಿತ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ಮಾಡಿದರು. ಕೆಐಐಟಿ ಸಿಬ್ಬಂದಿ, ಎನ್ಸಿಸಿ ಕೆಡೆಟ್ಗಳು ಮತ್ತು ಭದ್ರತಾ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಕಿಸ್ನಲ್ಲಿ ಮುಖ್ಯ ಅತಿಥಿಯಾಗಿದ್ದ ವಿಶ್ವೇಶ್ವರ ಭಟ್
ಕಿಸ್ನಲ್ಲಿ ನಡೆದ ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ, ವಿಶ್ವವಾಣಿ ಹಾಗೂ ಪ್ರವಾಸಿ ಪ್ರಪಂಚದ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಧ್ವಜಾರೋಹಣ ನೆರವೇರಿಸಿದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಭಟ್ ಅವರು, "ನಾವೀಗ ಬಡತನ ಮತ್ತು ಅನಕ್ಷರತೆಯಿಂದ ಮುಕ್ತಿ ಪಡೆಯಬೇಕು ಹಾಗೂ ಶಿಕ್ಷಣದ ಮೂಲಕ ಸ್ವಾತಂತ್ರ್ಯವನ್ನು ಸಾಧಿಸಬೇಕು. ಕೆಐಐಟಿ ಮತ್ತು ಕಿಸ್ ಸಂಸ್ಥೆಗಳ ಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರ ಅಪಾರ ಬದ್ಧತೆ ಮತ್ತು ಸ್ಫೂರ್ತಿಯನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಸಮಂತ ಅವರು ಅನೇಕ ತಲೆಮಾರುಗಳಿಗೆ ಸ್ಫೂರ್ತಿಯಾಗಿದ್ದಾರೆ. ನಿಮ್ಮ ಭವಿಷ್ಯವು ಅತ್ಯುತ್ತಮ ಹಾಗೂ ಸುರಕ್ಷಿತ ಕೈಗಳಲ್ಲಿದೆʼ ಎಂದರು.

ʼಸಮಂತ ಅವರು ಸರಳತೆಯ ಸಾಕಾರಮೂರ್ತಿ. ಅವರ ಕಾರ್ಯವೈಖರಿ ಮತ್ತು ದೂರದೃಷ್ಟಿ ಇಡೀ ದೇಶಕ್ಕೇ ಮಾದರಿ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಇಲ್ಲಿ ಆಚರಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಅನುಭವಗಳಲ್ಲಿ ಒಂದು. ನೈಜ ಸ್ವಾತಂತ್ರ್ಯ ಎಂದರೆ ಕೇವಲ ರಾಜಕೀಯ ಮುಕ್ತಿಯಲ್ಲ, ಅದು ಪ್ರತಿಯೊಬ್ಬ ದೀನ-ದಲಿತನಿಗೂ ಸಿಗುವ ಶಿಕ್ಷಣ ಮತ್ತು ಆರ್ಥಿಕ ಸಮಾನತೆ ಎಂಬುದನ್ನು ಈ ಕ್ಯಾಂಪಸ್ ಜಗತ್ತಿಗೆ ಸಾರುತ್ತಿದೆʼ ಎಂದು ಬಣ್ಣಿಸಿದರು.
ದೇಶದಲ್ಲಿ ವಿದ್ಯಾರ್ಥಿಗಳದ್ದೇ ಪ್ರಮುಖ ಪಾತ್ರ: ಡಾ. ಸಮಂತ
"ನಮ್ಮ ಪ್ರಗತಿಯೇ ನಿಮ್ಮ ಪ್ರಗತಿ. ನೀವು ಪ್ರಗತಿ ಸಾಧಿಸುವವರೆಗೂ ನಮಗೆ ಸಂತೋಷವಾಗಲಿ ಅಥವಾ ತೃಪ್ತಿ ಸಿಗುವುದಿಲ್ಲ. ಭಾರತ ಇಂದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರಲ್ಲಿ ನೀವೆಲ್ಲ ಪ್ರಮುಖ ಪಾತ್ರ ವಹಿಸಲಿದ್ದೀರಿ," ಎಂದು ಡಾ. ಅಚ್ಯುತ ಸಮಂತ ಅವರು ಹೇಳಿದರು.
ಕಿಸ್ ಕಳೆದ 35 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ನಮ್ಮ ಈ ಸಂಸ್ಥೆಯನ್ನು ಅತ್ಯುತ್ತಮ ಮಾಡುವ ಪ್ರಯತ್ನ ನಿರಂತರವಾಗಿರಲಿದೆ ಎಂದರು.

ಕಿಸ್ ಕಾರ್ಯದರ್ಶಿ ಆರ್. ಎನ್. ಡ್ಯಾಶ್, ಸಹ-ಕುಲಪತಿ ಪ್ರೊ. ರಾಜು ಕೆ. ಡಿ., ಕುಲಸಚಿವ ಜ್ಞಾನ ರಂಜನ್ ಮೊಹಂತಿ, ಹಿರಿಯ ಮಹಾನಿರ್ದೇಶಕ ಡಾ. ದೇಬಾಶಿಶ್ ಬಂಡೋಪಾಧ್ಯಾಯ ಮತ್ತು ಕಿಸ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪ್ರಶಾಂತ್ ರೌತ್ರೇ ಸೇರಿದಂತೆ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಿಮ್ಸ್ನಲ್ಲಿ ನಡೆದ ಸಮಾರಂಭದಲ್ಲಿ ಉಪ ಕುಲಪತಿ ಪ್ರೊ. ಸಿ. ಬಿ. ಕೆ. ಮೊಹಂತಿ ಅವರು ಧ್ವಜಾರೋಹಣ ನೆರವೇರಿಸಿದರು. ಕೆಐಐಟಿ ಇಂಟರ್ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲ ಡಾ. ಸಂಜಯ್ ಸುವಾರ್ ಹಾಗೂ ಕೆಐಐಟಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ದಿಲೀಪ್ ಕುಮಾರ್ ತ್ರಿಪಾಠಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು.
ವಿದ್ಯಾರ್ಥಿಗಳ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆಗಳು ಮುಕ್ತಾಯಗೊಂಡವು. ಇದರ ನಂತರ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.