ಕಲ್ಲೂರು: ಚಿಕ್ಕ ಕುಟುಂಬ ಹೊಂದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಉಚಿತವಾಗಿ ಮಹಿಳೆಯರಿಗೆ ಲಭ್ಯವಿರುವ ಕಾಪರ್-ಟಿ, ಮಾಲಾ-ಎನ್, ಛಾಯಾ(ಮಾತ್ರೆಗಳು), ಪ್ರತಿ ಮೂರು ತಿಂಗಳಿಗೊಮ್ಮೆ ಪಡೆಯಬಹುದಾದ ಅಂತರ ಚುಚ್ಚುಮದ್ದು, ಹಾಗೂ ಪುರುಷರಿಗೆ ಲಭ್ಯವಿರುವ ಕಾಂಡೊಮ್ ಬಳಸುವಿಕೆಯಿಂದ ಮಗುವಿನ ಜನನದ ಮಧ್ಯ ಕನಿಷ್ಟ ಮೂರು ವರ್ಷಗಳ ಅಂತರ ಕಾಪಾಡಲು ಸಹಕಾರಿ ಎಂದು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸಂಗಮೇಶ್ ತಿಳಿಸಿದರು.

ಕಲ್ಲೂರು ಗ್ರಾಮದಲ್ಲಿ ಗ್ರಾಮಪಂಚಾಯತ ಮೂಲಕ ವಿಬಿಜಿ ರಾಮ್ ಜಿ ಕೂಲಿಕಾರ್ಮಿಕರು ತಮ್ಮ 6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳ ದಿನದ ಅವಧಿಯಲ್ಲಿ ಪಾಲನೆಗಾಗಿ ಆರಂಭಿಸಿರುವ ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ ನೀಡಿ ಮಾತನಾಡುತ್ತಾ, ಸರಕಾರದ ಈ ಯೋಜನೆಯು ಮಹತ್ವಪೂರ್ಣವಾದುದು, ಕೇಂದ್ರದಲ್ಲಿ ತೆಗೆದುಕೊಳ್ಳುವ ಕಾಳಜಿಯ ಜೊತೆ ಜೊತೆಗೆ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಎರಡನೇ ಮಗುವಿನ ಜನನಕ್ಕೆ ಅಂತರವಿಡಲು ಇಲಾಖೆಯಲ್ಲಿ ಉಚಿತವಾದ ವಿಧಾನಗಳ ಅಳವಡಿಕೆ ಮಾಹಿತಿ ಪಡೆಯಲು ಹಾಗೂ ಮಕ್ಕಳು ಬೇಡವೆನಿಸಿದರೆ ಲ್ಯಾಪರ್ಸ್ಕೋಪ್, ಟ್ಯುಬೆಕ್ಟೂಮಿ, ಶಸ್ತ್ರಚಿಕಿತ್ಸೆ ಲಭ್ಯವಿದೆ. ಪುರುಷರಿಗೆ ಎನ್ಎಸ್ವಿ ಶಸ್ತ್ರಚಿಕಿತ್ಸೆ ಲಭ್ಯವಿದೆ. ಎಂದು ತಿಳಿಸಿದರು.
ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಮಾತನಾಡಿ, ಮಗುವು ಎರಡು ವರ್ಷ ತುಂಬುವವರೆಗೂ ಪೂರಕ ಆಹಾರದೊಂದಿಗೆ ತಾಯಿಯ ಎದೆಹಾಲುನಿಣಿಸಲು ಮರೆಯಬಾರದು. ಅಲ್ಲದೆ ಮಗುವಿನ ಬಾಲ್ಯದಲ್ಲಿ ಕಂಡುಬರುವ 12 ಮಾರಕ ರೋಗಗಳ ವಿರುದ್ಧದ ಲಸಿಕೆಗಳನ್ನು ತಪ್ಪದೆ ಆಯಾ ಅವಧಿಯಲ್ಲಿ ಹಾಕಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ ಬಿಆರ್ ಅಂಬೇಡ್ಕರ್ ಬಾಲಕರ ಮೇಟ್ರೀಕ್ ಪೂರ್ವ ವಸತಿ ನಿಲಯಕ್ಕೆ ಬೇಟಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಡುಗೆ ಸಿಬ್ಬಂದಿಯರಿಗೆ ತಿಳಿಸಲಾಯಿತು. ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ ಶುಕ್ಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ್, ಅಂಗನವಾಡಿ ಕಾರ್ಯಕರ್ತೆ ಚಂದ್ರನೀಲಾ, ಶಿಶು ಪಾಲನಾ ಕೇಂದ್ರದ ಕೆರ್ಟೇಕರ್ ಮಹಾದೇವಿ, ಪವಿತ್ರಾ, ಹಾಗೂ ಇತರರು ಉಪಸ್ಥಿತರಿದ್ದರು.