ಚನ್ನಪಟ್ಟಣ: ಅನನ್ಯ ಸಂಸ್ಥೆಯ ದಶಮಾನೋತ್ಸವದ ಸಂಭ್ರಮ ಹಾಗೂ ‘ಬೊಂಬೆ ನಾಡಿನ ಬೆಳಕು’ ಪುಸ್ತಕ ಬಿಡುಗಡೆ ಸಮಾರಂಭವನ್ನು ನಗರದ ಶತಮಾನೋತ್ಸವ ಭವನದಲ್ಲಿ ಅದ್ದೂರಿಯಾಗಿ ನೆರವೇರಿತು.
ಕಳೆದ ಹತ್ತು ವರ್ಷಗಳಿಂದ ಮಕ್ಕಳಿಗೆ ದೇಸಿ ಕಲೆ ಮತ್ತು ಬೆಳ್ಳಿತೆರೆ ಹಾಗೂ ಮಾಧ್ಯಮ ತರಬೇತಿ ನೀಡುತ್ತಾ ಬಂದಿರುವ ಅನನ್ಯ ಸಂಸ್ಥೆಯು ಈವರೆಗೆ ಸುಮಾರು 200 ಮಕ್ಕಳಿಗೆ ತರಬೇತಿ ನೀಡಿದೆ. ಸಂಸ್ಥೆಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಇಂದು ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ, ಸಿನಿಮಾ ಕ್ಷೇತ್ರ ಹಾಗೂ ವಿವಿಧ ಸ್ವಯಂ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮವು ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿತು. ಕನ್ನಡ ಬಾವುಟಗಳು ಹಾಗೂ ಕನ್ನಡ ಶಾಲುಗಳಿಂದ ಅಲಂಕರಿಸಲ್ಪಟ್ಟ ಸಭಾಂಗಣದಲ್ಲಿ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಕನ್ನಡದ ಅಸ್ಮಿತೆ, ಭಾಷಾ ಪ್ರಜ್ಞೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
ಅನನ್ಯ ಸಂಸ್ಥೆಯ ಮಾರ್ಗದರ್ಶಕರಾದ ನಾದಬ್ರಹ್ಮ ಹಂಸಲೇಖ ಅವರು ಮಾತನಾಡಿ, “ಅನನ್ಯ ಸಂಸ್ಥೆಯು ಇನ್ನಷ್ಟು ಅನನ್ಯವಾಗಿ ಬೆಳೆಯಲಿ, ಅನನ್ಯ ಕನ್ನಡವಾಗಲಿ” ಎಂದು ಹಾರೈಸಿದರು. ಅವರ ಸಾಹಿತ್ಯ ಮತ್ತು ಸಂಯೋಜನೆಯಲ್ಲಿ ಮೂಡಿಬಂದ ಹೊಸ ಕನ್ನಡ ಗೀತೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರೇಕ್ಷಕರ ಮನಸೂರೆಗೊಂಡವು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಾಡಿನ ಚಿಂತಕರು, ವಿಚಾರವಾದಿಗಳು ಹಾಗೂ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಕನ್ನಡ ಪ್ರಜ್ಞೆ, ಕನ್ನಡ ಚರಿತ್ರೆ ಮತ್ತು ಸಾಹಿತ್ಯ ಪರಂಪರೆಯ ಕನ್ನಡದ ಅಸ್ಮಿತೆ ಮತ್ತು ಭಾಷಾ ಪ್ರಜ್ಞೆಯ ಮಹತ್ವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರದಲ್ಲಿ ಚಿಂತಕರು ಹಾಗೂ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಮಾತನಾಡಿ, ಶಿಕ್ಷಣವು ವ್ಯಕ್ತಿಯ ಬದುಕಿಗೆ ನೀಡುವ ಬೆಳಕು ಹಾಗೂ ತಾಯಿ ಭಾಷೆಯ ಸಂರಕ್ಷಣೆಯನ್ನು ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.

ಡಿ. ಶಿವಶಂಕರ್ ಅವರು ಮಾತನಾಡಿ, ಚಳುವಳಿಗಳು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗದೆ. ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಕಾಪಾಡುವ ಚಳುವಳಿಗಳಾಗಬೇಕು ಎಂದು ಕರೆ ನೀಡಿದರು.
ನಂತರ ಖ್ಯಾತ ಗೀತರಚನಕಾರ ಕವಿರಾಜ್ ಮಾತನಾಡಿದ ಅವರು ಕನ್ನಡ ಸಿನಿಮಾ ಹಾಗೂ ಕನ್ನಡ ಭಾಷೆಯ, ಕನ್ನಡ ಸಿನಿಮಾಗಳನ್ನು ಪ್ರೀತಿಸುವ ಮತ್ತು ಕನ್ನಡ ಭಾಷೆಯನ್ನು ಗೌರವಿಸುವಂತೆ ಮನವಿ ಮಾಡಿದರು.
ಕನ್ನಡಾಭಿಮಾನಿ ಭುವನೇಶ್ ಅವರು ಡಿಜಿಟಲ್ ಮಾಧ್ಯಮ ಹಾಗೂ ಹೊಸ ತಂತ್ರಜ್ಞಾನಗಳ ಮೂಲಕ ಯುವ ಪೀಳಿಗೆಯಲ್ಲಿ ಕನ್ನಡವನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು
ಕಾರ್ಯಕ್ರಮದಲ್ಲಿ ಡಾ ಹಂಸಲೇಖ ಮತ್ತು ಕಾಳೇಗೌಡ ನಾಗವಾರ, ಡಾ. ಅಪ್ಪಗೆರೆ ತಿಮ್ಮರಾಜು, ರವೀಂದ್ರ ಸಿರವರ ಮತ್ತಿತರರು ಗಣ್ಯರು ಸೇರಿದಂತೆ ಮಾತನಾಡಿದರು.
ಇದೇ ವೇಳೆಯಲ್ಲಿ ಸಮಾರಂಭದಲ್ಲಿ ‘ಬೊಂಬೆ ನಾಡಿನ ಬೆಳಕು’ ಪುಸ್ತಕವನ್ನು ನಾದಬ್ರಹ್ಮ ಹಂಸಲೇಖ, ಲತಾ ಹಂಸಲೇಖ, ಇಂದಿರಾ ಕೃಷ್ಣಪ್ಪ, ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ. ಕಾಳೇಗೌಡ ನಾಗವಾರ, ಡಾ. ಅಪ್ಪಗೆರೆ ತಿಮ್ಮರಾಜು, ರವೀಂದ್ರ ಸಿರವರ, ಈ ಧನಂಜಯ, ರಾಜೇಶ್ ರಾಂಪುರ ಸೇರಿದಂತೆ ಹಲವು ಗಣ್ಯರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಗಣ್ಯರು ಅನನ್ಯ ಸಂಸ್ಥೆಯ ದಶಕದ ಸಾಧನೆಯನ್ನು ಶ್ಲಾಘಿಸಿ, “ಅನನ್ಯ ದಶಕವು ಶತಕವಾಗಲಿ” ಎಂದು ಹಾರೈಸಿದರು.
ಗಣ್ಯರು, ಸಾಹಿತಿಗಳು, ಕಲಾವಿದರು, ಕನ್ನಡಪರ ಚಳುವಳಿಗಾರರು, ಅನನ್ಯ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಕೊನೆಯಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ರಂಜಿತ ರಾಜೇಶ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ರಾಜೇಶ್ ರಾಂಪುರ ಹಾಗೂ ಅನನ್ಯ ಬಳಗದ ನೇತೃತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಅನನ್ಯದ ಹತ್ತು ವರ್ಷಗಳ ಪಯಣಕ್ಕೆ ಮೈಲಿಗಲ್ಲಾದ ಈ ಸಮಾರಂಭವು ಕನ್ನಡದ ಭವಿಷ್ಯದ ಪಯಣಕ್ಕೆ ಹೊಸ ಸಂಕಲ್ಪವನ್ನು ಮೂಡಿಸಿತು. ಅನನ್ಯ ದಶಮಾನೋತ್ಸವ ಹಾಗೂ “ಬೊಂಬೆ ನಾಡಿನ ಬೆಳಕು” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು.
ಕನ್ನಡ ಪ್ರಜ್ಞೆ, ಕನ್ನಡ ಚರಿತ್ರೆ ಮತ್ತು ಸಾಹಿತ್ಯ ಪರಂಪರೆಯನ್ನು ಕನ್ನಡದ ಅಸ್ಮಿತೆ ಮತ್ತು ಭಾಷಾ ಪ್ರಜ್ಞೆಯ ಇಂದಿನದಲ್ಲಿ ಮೂಡಬೇಕಿದೆ.
ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಚಿಂತಕರು, ಹಿರಿಯ ಸಾಹಿತಿ
ಶಿಕ್ಷಣವು ವ್ಯಕ್ತಿಯ ಬದುಕಿಗೆ ನೀಡುವ ಬೆಳಕು ಹಾಗೂ ತಾಯಿ ಭಾಷೆಯ ಸಂರಕ್ಷಣೆಯನ್ನು ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ಜವಾಬ್ದಾರಿಯಾಗಬೇಕು.
ನಿರಂಜನ್ ಆರಾಧ್ಯ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಚಿಂತಕರು
ಅನನ್ಯ ಸಂಸ್ಥೆಯ ದಶಮಾನೋತ್ಸವ ಸಂಭ್ರಮದಲ್ಲಿ ಗಣ್ಯರು, ಸಾಹಿತಿಗಳು, ಕಲಾವಿದರು, ಕನ್ನಡಪರ ಚಳುವಳಿಗಾರರು, ಅನನ್ಯ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.