ಮರಿಯಮ್ಮನಹಳ್ಳಿ: ನಮಗೆ ಮಕ್ಕಳ ಭವಿಷ್ಯ ಮತ್ತು ಶಿಕ್ಷಣ ತುಂಬಾ ಮುಖ್ಯ ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಸಿಗಲಿ ಎಂಬ ಉದ್ದೇಶದಿಂದ ಬಿ.ಎಂ.ಎಂ.ಕಂಪನಿಯು 27 ಅತಿಥಿಶಿಕ್ಷಕರನ್ನು ನೇಮಿಸಿದೆ ಎಂದು ಕಂಪನಿಯ ನಿರ್ದೇಶಕರಾದ ಗಣೇಶ್ ಹೆಗಡೆ ರವರು ನುಡಿದರು. ಅವರು ಸೋಮವಾರ ಬಿಎಂಎಂ ಕಂಪನಿಯ ಆವರಣದಲ್ಲಿ ನಡೆದ, ಮರಿಯಮ್ಮನಹಳ್ಳಿ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೇಮಕ ಗೊಂಡ ಅತಿಥಿಶಿಕ್ಷಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಆಯಾ ಗ್ರಾಮದ ಸ್ಥಳೀಯ ಪದವಿಧರರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಸ್ಥಳಿಯ ಅರ್ಹ ಪದವಿದರ ಅತಿಥಿಶಿಕ್ಷಕರನ್ನು ನೇಮಿಸಲಾಗಿದೆ. ಅಲ್ಲದೆ ಮನುಷ್ಯನಿಗೆ ಮೂಲಸೌಕರ್ಯಗಳು ಎಷ್ಟು ಅವಶ್ಯಕವೋ, ಶಿಕ್ಷಣವು ಅಷ್ಟೇ ಅವಶ್ಯ. ಶಿಕ್ಷಕರು ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಿ ಸಮಾಜಕ್ಕೆ ನೀಡಿ ಎಂದು ಹೇಳಿದರು. ನಂತರ
ಹೊಸಪೇಟೆ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಉಮಾಪತಿ ರವರು ಮಾತನಾಡಿ, ಬಿ.ಎಂ.ಎಂ. ಕಂಪನಿಯಿಂದ ಅತಿಥಿ ಶಿಕ್ಷಕರಿಗೆ ಜೀವನ ಸಿಕ್ಕಿದೆ. ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ತುಂಬಾ ಸಹಾಯವಾಗಿದೆ. ಸಮುದಾಯದ ಸಹಭಾಗಿತ್ವದಲ್ಲಿ ಶಿಕ್ಷಣದ ಅಭಿವೃದ್ದಿಸಾಧ್ಯ. ಮಕ್ಕಳ ಸೇವೆ ಮಾಡಿದರೆ ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತುಂಬಾ ಇದೆ ಆದರೆ ಎಲ್ಲವೂ ಸರ್ಕಾರ ಮತ್ತು ಇಲಾಖೆಯಿಂದ ಆಗುವುದಿಲ್ಲ. ಇಂತಹ ಸಂಸ್ಥೆಗಳಿಂದ ಅತಿಥಿ ಶಿಕ್ಷಕರನ್ನು ನೀಡುವುದರಿಂದ ಸರ್ಕಾರಕ್ಕೆ ಮತ್ತು ಇಲಾಖೆಗೆ ತುಂಬಾ ಸಹಾಯವಾಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಕರು ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿದರೆ. ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಪ್ರಾಥಮಿಕ ಶಾಲೆಯಲ್ಲಿ ಕಲಿಸಿದಂತ ಶಿಕ್ಷಕರನ್ನು ಮಕ್ಕಳು ಜೀವನ ಪೂರ್ತಿ ಮರೆಯುದಿಲ್ಲ. ಬಿ.ಎಂ.ಎಂ.ಕಂಪನಿಯು 27ಜನ ಅತಿಥಿ ಶಿಕ್ಷಕರನ್ನು ನೀಡಿದೆ. ಹಾಗೂ ಶಿಕ್ಷಣಕ್ಕೆ ನೀಡುವ ಸಹಕಾರ ಮತ್ತು ಸಹಾಯ ಇದಕ್ಕೆ ಶಿಕ್ಷಣ ಇಲಾಖೆಯು ಅಭಾರಿ. ಸರ್ಕಾರಿಶಾಲೆಗಳಲ್ಲಿ ಸೇವೆಸಲ್ಲಿಸುವ ಶಿಕ್ಷಕರು ಪ್ರತಿಭಾವಂತರು, ಇದರಿಂದ ಸರ್ಕಾರಿ ಶಾಲೆಗಳು ಈಗ ಸುಧಾರಿಸಿವೆ ಎಂದು ಹೇಳಿದರು.

ಶಿಕ್ಷಣಸಂಯೋಜಕ ರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಮಾರ್ಹದಪ್ಪ ಮಾತನಾಡಿ, ಚಿಲಕನಹಟ್ಟಿ ಗ್ರಾ.ಪಂ.ವ್ಯಾಪ್ತಿಯ ಶಾಲೆಗಳಿಗೂ ಬಿ.ಎಂ.ಎಂ.ಕಂಪನಿ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆಸಲು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಬಿಎಂಎಂ ಕಂಪನಿಯ ಅಧಿಕಾರಿಗಳಾದ ಗಿರೀಶ್ ಕಾಕನೂರು, ಅರುಣ್ ಕುಮಾರ್, ಜೆಕಬ್ ಸುದರ್ಶನ,
ಶಿಕ್ಷಣಸಂಯೋಜಕ ಅಬ್ದುಲ್ ಕಲಾಂ, ಶಿಕ್ಷಕ ಬಿ.ಪರಶುರಾಮ, ಕೆ.ಕುಮಾರಸ್ವಾಮಿ, ರಹಿಮಾನ್, ಮಹಮದ್ ಬಾಷ, ಸೇರಿದಂತೆ ಇತರರಿದ್ದರು.