ಬಳ್ಳಾರಿ : ಬಳ್ಳಾರಿ ತಾಲೂಕಿನ ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿರುವ ಅಮಾನವೀಯ ಕೃತ್ಯ ರೈತ ಸಮುದಾಯವನ್ನು ಬೆಚ್ಚಿಬೀಳಿಸಿದೆ. ರೈತನೊಬ್ಬ ವರ್ಷಗಳ ಶ್ರಮ, ಬೆವರು ಮತ್ತು ಸಾವಿರಾರು ರೂಪಾಯಿ ಬಂಡವಾಳ ಹೂಡಿ ಬೆಳೆಸಿದ್ದ ನೇರಳೆ (ನೀಲದಹಣ್ಣು) ಗಿಡಗಳನ್ನು ಕಿಡಿಗೇಡಿಗಳು ರಾತ್ರಿ ವೇಳೆ ಹೊಲಕ್ಕೆ ನುಗ್ಗಿ ಕಡಿದು ಹಾಕಿರುವ ಘಟನೆ ಗ್ರಾಮದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ರೈತ ಗೋಶಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ 50ಕ್ಕೂ ಹೆಚ್ಚು ನೇರಳೆ ಗಿಡಗಳನ್ನು ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಡಿದು ನಾಶಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಹೊಲಕ್ಕೆ ತೆರಳಿದ ಕುಟುಂಬದವರು ಗಿಡಗಳು ನೆಲಕ್ಕುರುಳಿರುವ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಬೆಳೆದಿದ್ದ ಗಿಡಗಳು ಕ್ಷಣಾರ್ಧದಲ್ಲಿ ನಾಶವಾಗಿರುವುದನ್ನು ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ನೇರಳೆ ಗಿಡಗಳು ಕೇವಲ ಮರಗಳಲ್ಲ, ರೈತನ ಭವಿಷ್ಯದ ಕನಸುಗಳಾಗಿದ್ದವು. ಉತ್ತಮ ಆದಾಯದ ನಿರೀಕ್ಷೆಯಲ್ಲಿ ಗೋಶಪ್ಪ ಕುಟುಂಬವು ಸಾವಿರಾರು ರೂಪಾಯಿ ವೆಚ್ಚ ಮಾಡಿ, ನೀರುಣಿಸಿ, ರಕ್ಷಣೆ ನೀಡಿ ಬೆಳೆಸಿದ್ದ ಗಿಡಗಳನ್ನು ದುಷ್ಕರ್ಮಿಗಳು ಯಾವುದೇ ಮಾನವೀಯತೆ ಇಲ್ಲದೆ ಕಡಿದು ಹಾಕಿರುವುದು ರೈತರ ಮನಸ್ಸಿಗೆ ಆಘಾತ ಉಂಟುಮಾಡಿದೆ.
ಈ ಘಟನೆ ಕುರಿತು ಗೋಶಪ್ಪ ಅವರ ಪುತ್ರರಾದ ಚಂದ್ರಪ್ಪ, ಶಿವಪ್ಪ, ಶಂಕ್ರಪ್ಪ, ಗಂಗಾಧರ ಹಾಗೂ ಬಸವ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಹಗಲು-ರಾತ್ರಿ ಶ್ರಮಪಟ್ಟು ಈ ತೋಟ ಬೆಳೆಸಿದ್ದೆವೆ. ವರ್ಷಗಳ ಪರಿಶ್ರಮವನ್ನು ಒಂದೇ ರಾತ್ರಿ ನಾಶ ಮಾಡಿದ್ದಾರೆ. ಇದು ಕೇವಲ ಗಿಡಗಳನ್ನು ಕಡಿದ ಪ್ರಕರಣವಲ್ಲ, ನಮ್ಮ ಕುಟುಂಬದ ಬದುಕಿನ ಮೇಲೆ ನಡೆಸಿದ ದಾಳಿ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಸಹ ಘಟನೆಯನ್ನು ಖಂಡಿಸಿದ್ದು, ಕೃಷಿಯನ್ನೇ ನಂಬಿಕೊಂಡಿರುವ ರೈತರ ಮೇಲೆ ಇಂತಹ ದುಷ್ಕೃತ್ಯಗಳು ನಡೆಯುತ್ತಿರುವುದು ದುಃಖಕರ ಎಂದು ಹೇಳಿದ್ದಾರೆ. ಅಪರಾಧಿಗಳು ಯಾರು ಎಂಬುದನ್ನು ಪತ್ತೆಹಚ್ಚಿ ಶಿಕ್ಷೆ ನೀಡದಿದ್ದರೆ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ರೈತರು ಈಗಾಗಲೇ ಮೋಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. ಹೊಲದ ಸುತ್ತಮುತ್ತಲಿನ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೈತ ಸಮುದಾಯದ ಪ್ರಶ್ನೆ ಒಂದೇ – ರೈತನ ಬೆವರಿನ ಬೆಳೆಗೂ ರಕ್ಷಣೆ ಇಲ್ಲದಿದ್ದರೆ ಕೃಷಿ ಮಾಡುವವರ ಭವಿಷ್ಯ ಏನು? ವರ್ಷಗಳ ಪರಿಶ್ರಮವನ್ನು ಒಂದೇ ರಾತ್ರಿ ನಾಶಪಡಿಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದಾಸರ ನಾಗೇನಹಳ್ಳಿ ಗ್ರಾಮಸ್ಥರು ಮತ್ತು ರೈತ ಸಂಘಟನೆಗಳು ಒತ್ತಾಯಿಸಿವೆ.
ಈ ಘಟನೆ ಕೇವಲ ಒಂದು ಕುಟುಂಬದ ನಷ್ಟವಲ್ಲ; ರೈತನ ಶ್ರಮ, ಕನಸು ಮತ್ತು ಬದುಕಿನ ಮೇಲಿನ ಕ್ರೂರ ದಾಳಿಯಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.