ಬಳ್ಳಾರಿ : ಮಾರುತಿಪುರ ಕ್ಯಾಂಪ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳ ನೀಡಿರುವ ದಾನಿಗಳ ಕುಟುಂಬದ ವತಿಯಿಂದ ಶಾಲೆಗೆ ಪೀಠೋಪಕರಣಗಳು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ಕೊಡುಗೆಯಾಗಿ ನೀಡಲಾಯಿತು.
ಶಾಲೆಗೆ ಸ್ಥಳ ನೀಡಿರುವ ಎಂ. ಸಾಂಬಶಿವ ರಾವ್ ಮತ್ತು ಎಂ. ನಾಗಮಲ್ಲೇಶ್ವರಿ ಅವರ ಪುತ್ರಿ ಜಿ. ನಾಗರಾಜಕುಮಾರಿ ಹಾಗೂ ಅಳಿಯ ಜಿ. ಹನುಮಂತ ರಾವ್ ಮತ್ತು ಮಗನಾದ ಎಂ ಗಣಪೂರ್ಣ ಚಂದ್ರ ರಾವ್ ಅವರು ಆ. 8ರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಾದ ಪೀಠೋಪಕರಣಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನುಗಳನ್ನು ಕೊಡುಗೆಯಾಗಿ ನೀಡಿದರು.
ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಾದ ಪೀಠೋಪಕರಣಗಳು ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿದ ದಾನಿಗಳ ಕಾರ್ಯಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಶಾಲೆಯ ಶಿಕ್ಷಕರ ವತಿಯಿಂದ ಜಿ. ನಾಗರಾಜಕುಮಾರಿ ಹಾಗೂ ಜಿ. ಹನುಮಂತ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ದಾನಿಗಳ ಸೇವೆಯನ್ನು ಶಿಕ್ಷಕರು ಅಭಿನಂದಿಸಿದರು.