ರಾಯಚೂರು: ಸಾಂಕ್ರಾಮಿಕ ರೋಗವಾಗಿರುವ ಕ್ಷಯರೋಗವನ್ನು ತಕ್ಷಣದ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಸಂಪೂರ್ಣಗೊಳಿಸುವಿಕೆಯಿಂದ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದಾಗಿದೆ ಎಂದು ರಾಗಿಮಾನಗಡ್ಡಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಷ್ಫಾಕ್ ಹುಸೇನ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ರಾಗಿಮಾನಗಡ್ಡ ಮೂಲಕ ಉದಯನಗರದ, ಸರಕಾರಿ ಮೆಟ್ರೀಕ್ ಪೂರ್ವ ವಸತಿ ನಿಲಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಹಾಗೂ ಜಾಗೃತಿ ಶಿಬರದಲ್ಲಿ ಮಾತನಾಡುತ್ತಾ, ಸೋಂಕೀತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಯು ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವುದು.
ಕ್ಷಯರೋಗದಲ್ಲಿ ಎರಡು ವಿಧ
ಕ್ಷಯರೋಗವು ಶ್ವಾಸಕೋಶದ ಹಾಗೂ ಶ್ವಾಸಕೋಶೆತರ ಎಂದು ಎರಡು ವಿಧವಿದ್ದು, ಸೋಂಕು ದೇಹದ ಕೂದಲು ಮತ್ತು ಉಗುರು ಬಿಟ್ಟು ಉಳಿದ ಎಲ್ಲ ಭಾಗಕ್ಕೂ ಬರಬಹುದು.

ಕ್ಷಯ ರೋಗದ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಕಫದಲ್ಲಿ ರಕ್ತ ಎದೆನೋವು, ರಾತ್ರಿಯಲ್ಲಿ ಜ್ವರ ಬರುವದು, ಹಸಿವು ಆಗದೆ ಇರುವದು ತೂಕ ಕಡಿಮೆಯಾಗುವುದು ಈ ಲಕ್ಷಣ ಕಂಡ ಬಂದಲ್ಲಿ ಕಫದ ಸಂಗ್ರಹಣೆ ಮಾಡಿ ಕ್ಷಯರೋಗ ಕಂಡು ಹಿಡಿಯಲಾಗುತ್ತದೆ. ಶ್ವಾಸಕೋಶೇತರ ಸೋಂಕು ಇದ್ದಲ್ಲಿ ಎಕ್ಸ್ ರೇ ಪರೀಕ್ಷೆ ಮೂಲಕ ಕಂಡು ಹಿಡಿದು ದೇಹದ ಯಾವ ಭಾಗಕ್ಕೆ ಕ್ಷಯ ಬಂದಿರಬಹುದೆಂದು ಕಂಡು ಹಿಡಿದು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು. ಅಅ ಕ್ಷಯರೋಗಕ್ಕೆ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ವೈದ್ಯರ ಸಲಹೆಯಂತೆ ಸರಿಯಾಗಿ ಮಾತ್ರೆಗಳ ಸೇವನೆ ಹಾಗೂ ಅಗತ್ಯವಾದಾಗ ವೈದ್ಯರ ಬಳಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ನಿಕ್ಷಯ ಪೋಷಣೆ ಯೋಜನೆಯಲ್ಲಿ ಮಾಸಿಕ 1000/- ರೂಗಳನ್ನು 6 ತಿಂಗಳುಗಳ ವರೆಗೆ ಪೌಷ್ಟಿಕಾಹಾರ ಪ್ರೋತ್ಸಾಹ ಧನ ಪಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ಮಾತನಾಡಿ, ವೈಯಕ್ತಿಕ ಸ್ವಚ್ಛತ ಹಾಗೂ ರೋಗ ರುಜಿನಗಳ ತಡೆಗಾಗಿ ದಿನ ಸ್ನಾನ ಮಾಡುವುದು ಶುಭ್ರ ಬಟ್ಟೆ ಧರಿಸುವದು, ವಾರಕ್ಕೆ ಉಗುರುಗಳನ್ನು ಕತ್ತರಿಸಬೇಕು, ಕನಿಷ್ಠ ವಾರಕ್ಕೆ ಎರಡು ಭಾರಿ ತಲೆಸ್ನಾನ ಮಾಡಬೇಕು, ಋತುಚಕ್ರದ ವೇಳೆ ನೈರ್ಮಲ್ಯಕ್ಕೆ ಆಧ್ಯತೆ ನೀಡಬೇಕು ಎಂದು ತಿಳಿಸಿದರು. ಊಟದ ಮೊದಲು ಹಾಗೂ ಶೌಚದ ನಂತರ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತಪ್ಪದೆ ತೊಳೆದುಕೊಳ್ಳಲು ತಿಳಿಸಿ ಕೈತೊಳೆಯುವ ಆರು ಹಂತಗಳನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಿ ಆರೋಗ್ಯ ಶಿಕ್ಷಣ ನೀಡಿದರು. ಭವಿಷ್ಯದಲ್ಲಿ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಬರದಂತೆ ತಡೆಯಲು 14 ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ. ಲಸಿಕೆ ತಪ್ಪದೆ ಹಾಕಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ಬಿಎಸ್ಕೆ ವೈದ್ಯಾಧಿಕಾರಿ ಡಾ ಬುಶ್ರಾ, ವಸತಿನಿಲಯ ಮೇಲ್ವಿಚಾರಕಿ ಮಧುಮತಿ, ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ ಕುಮಾರ್, ಶುಶ್ರೂಷಕಿ ಅನುಸೂಯಾ, ಆರೋಗ್ಯ ಅಮೃತಮ್ಮ ಸೇರಿದಂತೆ ಅಡುಗೆ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಜರಿದ್ದರು.