ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ವಿವಿಧ ಸಮಾಜಗಳ ಮಹನೀಯರ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಲು ಪಾಲಿಕೆ ವತಿಯಿಂದ ಘೋಷಿಸಲಾದ ರೂ.50,000 ಅನುದಾನದ ಸದುಪಯೋಗವನ್ನು ಆಯಾ ಸಮಾಜದ ಮುಖಂಡರು ಪಡೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಮನವಿ ಮಾಡಿದ್ದಾರೆ.
’ನಾನು ಮಹಾಪೌರನಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಮಂಡಿಸಿದ ಮಹಾನಗರ ಪಾಲಿಕೆಯ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ಹಾಗೂ ಅವರ ಸಾಂಸ್ಕೃತಿಕ ಗೌರವಕ್ಕೆ ಆದ್ಯತೆ ನೀಡಲಾಗಿದೆ. ಅದರ ಭಾಗವಾಗಿ ವಿವಿಧ ಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿ ಆಚರಣೆಗಾಗಿ ಪಾಲಿಕೆ ವತಿಯಿಂದ ತಲಾ ರೂ.೫೦,೦೦೦ ಅರ್ಥಿಕ ನೆರವು ನೀಡುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿತ್ತು’ ಎಂದು ಸ್ಮರಿಸಿದರು.
ಹಿಂದುಳಿದ ಸಮುದಾಯಗಳ ಸಂಸ್ಕೃತಿ, ಪರಂಪರೆ ಮತ್ತು ಮಹನೀಯರ ವಿಚಾರಧಾರೆಗಳನ್ನು ಸಮಾಜಕ್ಕೆ ತಲುಪಿಸಲು ಹಾಗೂ ಜಯಂತಿಗಳನ್ನು ವ್ಯವಸ್ಥಿತವಾಗಿ ಆಚರಿಸಲು ಈ ನೆರವು ನೀಡಲಾಗುತ್ತಿದೆ. ನಗರದ ಎಲ್ಲಾ ವರ್ಗಗಳ ಹಾಗೂ ಸಮುದಾಯಗಳ ಸವಾಂಗೀಣ ಅಭಿವೃದ್ಧಿಯೊಂದಿಗೆ ಸಾಮಾಜಿಕ ಸಾಮರಸ್ಯಕ್ಕೆ ಪಾಲಿಕೆ ಬದ್ಧವಾಗಿದೆ.
ಬಳ್ಳಾರಿ ನಗರದ ಹಿಂದುಳಿದ ವರ್ಗಗಳ ವಿವಿಧ ಸಂಘ-ಸಂಸ್ಥೆಗಳು, ಸಮಾಜದ ಮುಖಂಡರು ಪಾಲಿಕೆಯ ನಿಯಮಾವಳಿಗಳ ಪ್ರಕಾರ ಈ ಅನುದಾನವನ್ನು ಪಡೆದುಕೊಂಡು ಕಾರ್ಯಕ್ರಮಗಳಲ್ಲಿ ಎಲ್ಲಾ ಸಮಾಜದವರು ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು ಎಂದು ಮೇಯರ್ ಪಿ.ಗಾದೆಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.