ನಾಯಕನಹಟ್ಟಿ : 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಹಾಲಿ ಶಾಸಕ ನಾಗೇಂದ್ರ ವಿರುದ್ಧ ಸೋಲುತ್ತೇನೆ ಎಂಬ ಭಯದಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಕ್ಷೇತ್ರಗಳನ್ನು ಹುಡುಕುತ್ತಿಯ ಅಲ್ಲಪ್ಪ ಎಂದು ಮಾಜಿ ಶಾಸಕ ನೇರಲಗುಂಟೆ ಎಸ್.ತಿಪ್ಪೇಸ್ವಾಮಿ ಹೇಳಿದ್ದಾರೆ.
ಪಟ್ಟಣದ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಂಪ್ಲಿ ಗಣೇಶನ ವಿರುದ್ಧ ಗೆಲ್ಲಲಾರದೇ ಸುರೇಶ್ಬಾಬು ಅವರೂ ಸಹ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. 2 ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಳ್ಳಾರಿಯವರೇ ಕಾರಣ ಎಂದು ಗುಡುಗಿದರು. ಬಾದಾಮಿಯಲ್ಲಿ ಗೆಲ್ಲಲು ಬಿಟ್ಟು ಮೊಳಕಾಲ್ಮೂರು ಕ್ಷೇತ್ರಕ್ಕೆ ಬರುತ್ತೀಯಲ್ಲಪ್ಪಾ? ಎಲ್ಲಿ ಸೋತಿತ್ತಿದ್ದೀಯೋ ಅಲ್ಲಿ ಗೆದ್ದು ಬರಬೇಕು. ಪಿ.ಎ.ಗಳ ಮಾತು ಕೇಳಿ ಬೆನ್ನಿಗೆ ಚೂರಿ ಹಾಕುವುದಾ..? ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರೇ ಭೀಕರ ಬರದ ಛಾಯೆ ಆವರಿಸಿದೆ. ಇಂತಹ ಪರೀಸ್ಥಿತಿಯಲ್ಲಿ ಕ್ಷೇತ್ರದಾದ್ಯಂತ ಗೋಶಾಲೆಗಳನ್ನು ತೆರೆಸಬೇಕಾಗಿದೆ.
“ಮೊಳಕಾಲ್ಮೂರು ಕ್ಷೇತ್ರವನ್ನು ಯಾರೂ ರಾಜಕೀಯ ಪ್ರಯೋಗಶಾಲೆಯಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಕ್ಷೇತ್ರದ ಜನರೊಂದಿಗೆ ವರ್ಷಗಳಿಂದ ಇದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರಿಗೆ ಅವಕಾಶ ನೀಡಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಒಮ್ಮೆ ಕ್ಷೇತ್ರಕ್ಕೆ ಬಂದು ಗೆದ್ದು, ಮತ್ತೆ ಕ್ಷೇತ್ರ ಬದಲಾಯಿಸಿ, ಚುನಾವಣೆ ಬಂದಾಗ ಮತ್ತೆ ಮೊಳಕಾಲ್ಮೂರಿನತ್ತ ನೋಡುವ ರಾಜಕಾರಣವನ್ನು ಜನರು ಪ್ರಶ್ನಿಸಬೇಕು. ಮೊಳಕಾಲ್ಮೂರು ಯಾರೊಬ್ಬರ ವೈಯಕ್ತಿಕ ರಾಜಕೀಯ ಆಸ್ತಿ ಅಲ್ಲ. ಇದು ಇಲ್ಲಿನ ಜನರ ಕ್ಷೇತ್ರ” ಎಂದು ತಿಪ್ಪೇಸ್ವಾಮಿ ಕಿಡಿಕಾರಿದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ್ ಮ್ಯಾಸನಾಯಕ ಮಾತನಾಡಿ ಶ್ರೀರಾಮುಲು ಅವರ ಸ್ಪರ್ಧೆಯ ಸಾಧ್ಯತೆಯನ್ನು ವಿರೋಧಿಸಿ, “ಇದು ಅವರಿಗೆ ತಕ್ಕದ್ದಲ್ಲ ” ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಬಿಜೆಪಿ ಕಾರ್ಯಕರ್ತರು ಕೇವಲ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವವರು ಅಲ್ಲ. ಕ್ಷೇತ್ರದಲ್ಲಿ ವರ್ಷಪೂರ್ತಿ ದುಡಿಯುವವರಿಗೆ ಪಕ್ಷದ ವರಿಷ್ಠರು ಗೌರವ ಕೊಡಬೇಕು” ಎಂದು ಅವರು ಒತ್ತಾಯಿಸಿದರು.
ಶ್ರೀರಾಮುಲು ಅವರು ಹಿಂದೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಅವರೊಂದಿಗೆ ತೀವ್ರ ರಾಜಕೀಯ ಸಂಘರ್ಷ ನಡೆದಿತ್ತು. 2018ರಲ್ಲಿ ಟಿಕೆಟ್ ವಿಚಾರದಲ್ಲಿ ಅಸಮಾಧಾನಗೊಂಡಿದ್ದ ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮುಲು ವಿರುದ್ಧವೇ ಕಣಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ಮತ್ತೆ ಮೊಳಕಾಲ್ಮೂರು ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಕುರಿತು ತಿಪ್ಪೇಸ್ವಾಮಿ ಹಾಗೂ ಪ್ರಭಾಕರ್ ಮ್ಯಾಸನಾಯಕ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿರುವುದು ಬಿಜೆಪಿಯೊಳಗಿನ ಟಿಕೆಟ್ ಪೈಪೋಟಿಗೆ ಮತ್ತಷ್ಟು ತೀವ್ರತೆ ತಂದಿದೆ. ಆದರೆ, ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಅಂತಿಮ ಪಕ್ಷದ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ. ಇತ್ತೀಚಿನ ರಾಜಕೀಯ ಚರ್ಚೆಗಳಲ್ಲಿ ಅವರ ಕ್ಷೇತ್ರ ಆಯ್ಕೆ ಕುರಿತು ವಿವಿಧ ಸಾಧ್ಯತೆಗಳು ಕೇಳಿಬರುತ್ತಿವೆ.
ಸ್ಥಳೀಯರಿಗೆ ಅವಕಾಶವೇ? ಹೊರಗಿನ ಅಭ್ಯರ್ಥಿಗೆ ಮಣೆವೇ? ಎಂಬ ಪ್ರಶ್ನೆ ಇದೀಗ ಮೊಳಕಾಲ್ಮೂರು ಬಿಜೆಪಿ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಗೊಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಕನ್ನಯ್ಯ ಗುಂಡಣ್ಣ ಸೇರಿದಂತೆ ಮತ್ತಿತರರು ಇದ್ದರು.