ರಾಷ್ಟ್ರೀಯ ಮೌಖಿಕ ನೈರ್ಮಲ್ಯ ದಿನಾಚರಣೆಯ ಅಂಗವಾಗಿ, ಟಿವಿಎಂ ಫಾರ್ಮಾಸಿ ಕಾಲೇಜಿನಲ್ಲಿ ಬಾಯಿ ಸ್ವಚ್ಛತೆ, ವಸಡು ಹಾಗೂ ಹಲ್ಲುಗಳ ಆರೋಗ್ಯ ಕುರಿತು ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಬಳ್ಳಾರಿಯ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾರತಿ ಎಸ್. ಎಚ್. ಅವರು ಮಾಡಿ "ಬಾಯಿ ಸ್ವಚ್ಛತೆಯೇ ಉತ್ತಮ ಆರೋಗ್ಯಕ್ಕೆ ಅಡಿಪಾಯ" ಎಂದು ತಿಳಿಸಿದರು.ನಂತರ ಮುಖ್ಯೋದ್ದೇಶ ಭಾಷಣ ಮಾಡಿದ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶ್ವೇತಾ ಹಳೇಮನಿಯವರು, ಬಾಯಿ ಮತ್ತು ವಸಡುಗಳ ಸಾಮಾನ್ಯ ರೋಗಗಳು, ಅವುಗಳನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ವಿಧಾನಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
ವಿಚಾರ ಸಂಕಿರಣದ ಸಮಾರೋಪದ ನುಡಿಗಳನ್ನಾಡಿದ ಡಾ. ಆರ್. ಎಲ್. ಎನ್. ಮೂರ್ತಿ ಅವರು, ಬಾಯಿ ಮತ್ತು ವಸಡುಗಳ ರೋಗಗಳನ್ನು ನಿರ್ಲಕ್ಷಿಸುವುದರಿಂದ ಹೃದಯ, ಶ್ವಾಸಕೋಶ ಸೇರಿದಂತೆ ದೇಹದ ಇತರ ಅಂಗಗಳ ಮೇಲೂ ಗಂಭೀರ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮವನ್ನು ಟಿವಿಎಂ ಫಾರ್ಮಾಸಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಚಿತ್ರಹಾಸಿನಿಯವರು ನಿರೂಪಿಸಿದರು. ಡಾ. ನಮ್ರತಾ ಅವರು ವಂದನಾರ್ಪಣೆ ಸಲ್ಲಿಸಿದರು.