LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಭಾರತ ಮತ್ತು ಇಂಡೋನೇಷ್ಯಾ: ನಾಗರಿಕತೆಯಿಂದ ಕಾರ್ಯತಂತ್ರದ ಪಾಲುದಾರಿಕೆಗೆ- ಡಾ.ಎಸ್. ಸಂಗಮೇಶ್

ಭಾರತ ಮತ್ತು ಇಂಡೋನೇಷ್ಯಾ ನಡುವಿನ ನಾಗರಿಕತೆಯ ಸಂಬಂಧ ಎರಡು ಸಾವಿರ ವರ್ಷಗಳಿಗಿಂತಲೂ ಪುರಾತನವಾದದ್ದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಚೀನ ಬಾಂಧವ್ಯ ಬಲಿಷ್ಠ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತನೆಯಾಗುತ್ತಿದೆ. ಇಂಡೋನೇಷ್ಯಾ ಪ್ರಧಾನಿ ಮೋದಿ ಅವರಿಗೆ ನೀಡಿರುವ ಅತ್ಯುನ್ನತ ನಾಗರಿಕ ಗೌರವ ಕೇವಲ ಒಬ್ಬ ನಾಯಕನಿಗೆ ಸಲ್ಲಿಸಿದ ಸನ್ಮಾನವಲ್ಲ. ಅದು ಭಾರತದ ಹಳೆಯ ನಾಗರಿಕತೆ ಹಾಗೂ ಉಭಯ ರಾಷ್ಟ್ರಗಳ ನಡುವಿನ ಆಳವಾದ ಸಾಂಸ್ಕೃತಿಕ ಬಾಂಧವ್ಯಕ್ಕೆ ದೊರೆತ ಗೌರವವಾಗಿದೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ತನ್ನ ನಾಗರಿಕತೆಯನ್ನು ಕೇವಲ ಇತಿಹಾಸವೆಂದು ಪರಿಗಣಿಸದೆ, ಭವಿಷ್ಯದ ಬಲಿಷ್ಠ ಸಹಭಾಗಿತ್ವಗಳನ್ನು ನಿರ್ಮಿಸುವ ಆಧಾರವಾಗಿ ಬಳಸುತ್ತಿದೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರು ತಮ್ಮಲ್ಲಿ "ಭಾರತದ ವಂಶಾವಳಿ ಇದೆ" ಎಂದು ಹೇಳಿರುವುದು ಹಾಗೂ ಪ್ರಧಾನಿ ಮೋದಿ ಅವರ ಆಡಳಿತವನ್ನು ಶ್ಲಾಘಿಸಿರುವುದು ಭಾರತದ ಸಾಂಸ್ಕೃತಿಕ ಪ್ರಭಾವ ಮತ್ತು ಜಾಗತಿಕ ಗೌರವ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ರಾಮಾಯಣ, ಮಹಾಭಾರತ, ಸಂಸ್ಕೃತ, ಗರುಡ ಹಾಗೂ ಬಾಲಿ ಮೊದಲಾದ ಹಂಚಿಕೊಂಡ ಸಾಂಸ್ಕೃತಿಕ ಸಂಕೇತಗಳು ಈಗ ಕೇವಲ ಸಾಂಸ್ಕೃತಿಕ ಬಂಧಗಳಾಗಿ ಉಳಿದಿಲ್ಲ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅವು ಭಾರತಇಂಡೋನೇಷ್ಯಾ ಸಂಬಂಧಗಳ ಪ್ರಮುಖ ಆಧಾರಸ್ತಂಭಗಳಾಗಿವೆ. "ವಿಕಾಸ್ ಭೀ, ವಿರಾಸತ್ ಭೀ" ಎಂಬ ಪ್ರಧಾನಿ ಮೋದಿ ಅವರ ದೃಷ್ಟಿಕೋನದ ಅನ್ವಯ, ಇಂಡೋನೇಷ್ಯಾದ ಪ್ರಂಬಾನನ್ ಹಿಂದೂ ದೇವಾಲಯದ ಸಂರಕ್ಷಣೆಗೆ ಭಾರತ ನೆರವು ನೀಡಲಿದ್ದು, ಹಂಚಿಕೊಂಡ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ತೋರಿಸಿದೆ.

ಹಿಂದೆ ಭಾರತೀಯ ವ್ಯಾಪಾರಿಗಳು ಮತ್ತು ಬೌದ್ಧ ಸನ್ಯಾಸಿಗಳು ಇಂಡೋನೇಷ್ಯಾದೊಂದಿಗೆ ಸಾಂಸ್ಕೃತಿಕ ಬಾಂಧವ್ಯ ಬೆಳೆಸಿದಂತೆ, ಇಂದು ಪ್ರಧಾನಿ ಮೋದಿ ಅದೇ ನಾಗರಿಕತೆಯ ವಿಶ್ವಾಸವನ್ನು ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ಹಾಗೂ ಸಾಗರ ಭದ್ರತೆ ಕ್ಷೇತ್ರಗಳ ಸಹಕಾರ ವಿಸ್ತರಣೆಗೆ ಬಳಸುತ್ತಿದ್ದಾರೆ. ಭೂತಕಾಲವನ್ನು ಪರಸ್ಪರ ಹಂಚಿಕೆಯ  ಭವಿಷ್ಯಕಾಲವಾಗಿ ರೂಪಿಸುವ ಮೂಲಕ ಪ್ರಧಾನಿ ಮೋದಿ ನಾಗರಿಕತೆಯ ರಾಜತಾಂತ್ರಿಕತೆಯನ್ನು ಭಾರತದ ವಿದೇಶಾಂಗ ನೀತಿಯ ಪ್ರಮುಖ ಆಧಾರವನ್ನಾಗಿ ರೂಪಿಸಿದ್ದಾರೆ.

ಭಾರತದ ಲಘು ಶಕ್ತಿ ಇದೀಗ ಯೋಗ ಮತ್ತು ಸಂಸ್ಕೃತಿಗೆ ಮಾತ್ರ ಸೀಮಿತವಾಗಿಲ್ಲ. ಶಿಕ್ಷಣ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಆರೋಗ್ಯ, ಪ್ರಜಾಪ್ರಭುತ್ವ ಸಂಸ್ಥೆಗಳು ಹಾಗೂ ಪರಂಪರೆ ಸಂರಕ್ಷಣೆಯಲ್ಲಿಯೂ ಭಾರತ ಜಾಗತಿಕ ಪ್ರಭಾವದ ಭಾಗವಾಗಿವೆ. ಸಂಸ್ಕೃತಿ ಮತ್ತು ವ್ಯಾಪಾರದ ಮೂಲಕ ಭಾರತ ಹಾಗೂ ಇಂಡೋನೇಷ್ಯಾವನ್ನು ಸಂಪರ್ಕಿಸಿದ್ದ ನಾಗರಿಕತಾ ಬಾಂಧವ್ಯಗಳು ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆಧುನಿಕ ಕಾರ್ಯತಂತ್ರದ ಪಾಲುದಾರಿಕೆಗೆ ಬುನಾದಿಯಾಗಿವೆ.

1965 ಭಾರತಪಾಕಿಸ್ತಾನ ಯುದ್ಧದ ವೇಳೆ ಇಂಡೋನೇಷ್ಯಾ ಪಾಕಿಸ್ತಾನವನ್ನು ಬೆಂಬಲಿಸಿತ್ತು. ಆದರೆ ಇಂದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅದು ಭಾರತದ ಅತ್ಯಂತ ಆಪ್ತ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಭಾರತದ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಾರ್ಹತೆ ಹಾಗೂ ಬಲಿಷ್ಠ ರಾಜತಾಂತ್ರಿಕತೆಯನ್ನು ಪ್ರತಿಬಿಂಬಿಸುತ್ತದೆ. ಮೋದಿ ಅವರ ವಿದೇಶಾಂಗ ನೀತಿಯು ಭಾರತದ ಪ್ರಾಚೀನ ನಾಗರಿಕತೆಯನ್ನು ಕೇವಲ ಹೆಮ್ಮೆಯ ಸಂಕೇತವಲ್ಲ, ಕಾರ್ಯತಂತ್ರದ ಸಹಭಾಗಿತ್ವ ನಿರ್ಮಿಸುವ ಹಾಗೂ ಜಾಗತಿಕ ನಾಯಕತ್ವವನ್ನು ಬಲಪಡಿಸುವ ಶಕ್ತಿಯುತ ಸಾಧನವನ್ನಾಗಿ ರೂಪಿಸಿದೆ.

ಭಾರತಇಂಡೋನೇಷ್ಯಾ ನಡುವೆ ಮಹತ್ವದ ಒಪ್ಪಂದಗಳು

ಭಾರತದೊಂದಿಗೆ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಖರೀದಿ ಒಪ್ಪಂದ ಮಾಡಿಕೊಂಡಿದೆ. "ಆಪರೇಷನ್ ಸಿಂಧೂರ್" ಸಂದರ್ಭದಲ್ಲಿ ಭಾರತದ ವಾಯು-ವಾಯು ಕ್ಷಿಪಣಿ ಸಾಮರ್ಥ್ಯ ಯಶಸ್ವಿಯಾದ ಬಳಿಕ ಇಂಡೋನೇಷ್ಯಾ "ಅಸ್ತ್ರ" ಕ್ಷಿಪಣಿಗಳನ್ನೂ ಖರೀದಿಸಿದೆ. ಜೊತೆಗೆ ಇಂಡೋನೇಷ್ಯಾದ ಸೇನಾ ಅಧಿಕಾರಿಗಳಿಗೆ ಭಾರತದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ.

ಸಮುದ್ರ ಸುರಕ್ಷತೆ ಮತ್ತು ಭದ್ರತಾ ಸಹಕಾರ ಕುರಿತ ಸಮಗ್ರ ಚೌಕಟ್ಟು ರೂಪಿಸಲಾಗಿದ್ದು, ಕರಾವಳಿ ರಕ್ಷಣಾ ಸಹಕಾರ, ನೀಲಿ ಆರ್ಥಿಕತೆ, ಬಂದರು ಅಭಿವೃದ್ಧಿ ಹಾಗೂ ಹಿಂದೂ ಮಹಾಸಾಗರದ ಸಾಗರ ವ್ಯಾಪಾರಕ್ಕೆ ಉತ್ತೇಜನ ನೀಡಲಾಗುತ್ತಿದೆ. ಮಲಕ್ಕಾ ಜಲಸಂಧಿಯ ಪ್ರವೇಶ ದ್ವಾರದಲ್ಲಿರುವ ಸಬಾಂಗ್ ಬಂದರನ್ನು ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ.

ಭಾರತದ ಎನ್.ಎಫ್.ಟಿ.ಡಿ.ಸಿ ಮಿಡ್ವೆಸ್ಟ್ ಲಿಮಿಟೆಡ್ ಮತ್ತು ಇಂಡೋನೇಷ್ಯಾದ ಪಿಟಿ ಪೆರ್ಮಿನಾಸ್ ನಡುವೆ ಅಪರೂಪದ ಭೂಖನಿಜ ಅಭಿವೃದ್ಧಿಗೆ ತ್ರಿಪಕ್ಷೀಯ ಒಪ್ಪಂದವಾಗಿದೆ. ಇದರಿಂದ ಜಾಗತಿಕ ಪೂರೈಕೆ ಸರಪಳಿಗೆ ವೈವಿಧ್ಯತೆ ಬರಲಿದೆ. ಉಕ್ಕು, ನಿಕಲ್ ಹಾಗೂ ಅಪರೂಪದ ಭೂಖನಿಜಗಳ ಉತ್ಪಾದನೆಯಲ್ಲಿ ಭಾರತೀಯ ಹೂಡಿಕೆಗೆ ದಾರಿ ತೆರೆಯಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ, ತಂತ್ರಜ್ಞಾನ ವಿನಿಮಯ ಹಾಗೂ ಉಪಗ್ರಹ ತಂತ್ರಜ್ಞಾನ ಸಾಮರ್ಥ್ಯ ವೃದ್ಧಿಗೆ ಸಹಕಾರ ಒಪ್ಪಂದವಾಗಲಿದೆ. ಇದರಿಂದ ಕೃಷಿ ಮೇಲ್ವಿಚಾರಣೆ, ವಿಪತ್ತು ನಿರ್ವಹಣೆ ಹಾಗೂ ಸಂವಹನ ಕ್ಷೇತ್ರಗಳಿಗೆ ಉಪಗ್ರಹ ಮಾಹಿತಿ ಹಂಚಿಕೊಳ್ಳುವ ಅವಕಾಶ ಸಿಗಲಿದೆ.

ಭಾರತದ ಸಾಫ್ಟ್ ಪವರ್ ಈಗ ಯೋಗ ಮತ್ತು ಸಂಸ್ಕೃತಿಯನ್ನು ಮೀರಿದೆ. ಐಐಎಂ ಬೆಂಗಳೂರು ತನ್ನ ಮೊದಲ ವಿದೇಶಿ ಕ್ಯಾಂಪಸ್ ಅನ್ನು ಇಂಡೋನೇಷ್ಯಾದ ಸಿಂಗಾಸಾರಿ ವಿಶೇಷ ಆರ್ಥಿಕ ವಲಯದಲ್ಲಿ ಆರಂಭಿಸಲಿದ್ದು, ಭಾರತದ ಉನ್ನತ ನಿರ್ವಹಣಾ ಶಿಕ್ಷಣಕ್ಕೆ ಆಗ್ನೇಯ ಏಷ್ಯಾದಲ್ಲಿ ಹೊಸ ಆಯಾಮ ದೊರೆಯಲಿದೆ.

ಭಾರತ ತನ್ನ ವಿದ್ಯುನ್ಮಾನ ಮತಯಂತ್ರ (ಇವಿಎಂ) ತಂತ್ರಜ್ಞಾನವನ್ನು ಇಂಡೋನೇಷ್ಯಾ ಜೊತೆ ಹಂಚಿಕೊಳ್ಳಲಿದೆ. ಭಾರತದ ಚುನಾವಣಾ ಆಯೋಗ ಮತ್ತು ಇಂಡೋನೇಷ್ಯಾದ ಚುನಾವಣಾ ಆಯೋಗ ನಡುವಿನ ಒಪ್ಪಂದದ ಮೂಲಕ ಚುನಾವಣಾ ನಿರ್ವಹಣೆ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ತಂತ್ರಜ್ಞಾನ ವಿನಿಮಯಕ್ಕೆ ಉತ್ತೇಜನ ದೊರೆಯಲಿದೆ.

ಶೀಘ್ರದಲ್ಲೇ ಭಾರತದ ಕೈಗೆಟುಕುವ ಔಷಧಗಳು ಇಂಡೋನೇಷ್ಯಾದ ಸುಮಾರು 28 ಕೋಟಿ ಜನರಿಗೆ ಲಭ್ಯವಾಗಲಿವೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳನ್ನೂ ನೀಡಲಾಗುತ್ತಿದೆ. ಭಾರತ ತನ್ನ ಮಧ್ಯಾಹ್ನದ ಊಟ ಯೋಜನೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾದರಿಯನ್ನು ಇಂಡೋನೇಷ್ಯಾ ಜೊತೆ ಹಂಚಿಕೊಳ್ಳಲಿದೆ.

ಆಹಾರ ಭದ್ರತೆಯನ್ನು ಬಲಪಡಿಸಲು ಭಾರತ ಇಂಡೋನೇಷ್ಯಾಗೆ 100 ಟನ್ ಉನ್ನತ ಗುಣಮಟ್ಟದ "ಡಿಡಬ್ಲ್ಯುಆರ್-162" ಗೋಧಿ ಬೀಜಗಳನ್ನು ಪೂರೈಸಲಿದೆ. ವೈರ್ಲೆಸ್ ಜಾಲ, ಕ್ವಾಂಟಮ್ ತಂತ್ರಜ್ಞಾನ ಹಾಗೂ ಮುಂದಿನ ತಲೆಮಾರಿನ ಡಿಜಿಟಲ್ ಮೂಲಸೌಕರ್ಯದಲ್ಲಿ ಸಹಕಾರದ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದು ಸ್ಟಾರ್ಟ್ಅಪ್ ಇಂಡಿಯಾ ಮಿಷನ್ಗೆ ನೆರವಾಗಲಿದೆ. ಭಾರತ ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಇಂಡೋನೇಷ್ಯಾ ಜೊತೆ ಹಂಚಿಕೊಳ್ಳಲಿದ್ದು, ಭಾರತದ ಯುಪಿಐ ಮತ್ತು ಇಂಡೋನೇಷ್ಯಾದ ಕ್ಯೂರಿಸ್ ಪಾವತಿ ವ್ಯವಸ್ಥೆಗಳ ಏಕೀಕರಣದ ಸಾಧ್ಯತೆಯೂ ಪರಿಶೀಲನೆಯಲ್ಲಿದೆ.

ವಿಪತ್ತು ನಿರ್ವಹಣೆಯಲ್ಲಿ ಸಹಕಾರಕ್ಕಾಗಿ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಇಂಡೋನೇಷ್ಯಾದ ಬಿ.ಎನ್.ಪಿ.ಬಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ತಂತ್ರಜ್ಞಾನ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಗಳು ಮತ್ತು ಸಂಯೋಜಿತ ವಿಪತ್ತು ನಿರ್ವಹಣೆಯ ಮೂಲಕ ಲಕ್ಷಾಂತರ ಜೀವಗಳನ್ನು ರಕ್ಷಿಸಲು ನೆರವಾಗಲಿದೆ.

"ವಿಕಾಸ್ ಭೀ, ವಿರಾಸತ್ ಭೀ" ದೃಷ್ಟಿಕೋನದಡಿ, ಇಂಡೋನೇಷ್ಯಾದ ಯೋಗ್ಯಕಾರ್ತದಲ್ಲಿರುವ 9ನೇ ಶತಮಾನದ ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಪ್ರಂಬಾನನ್ ದೇವಾಲಯ ಸಂಕೀರ್ಣದ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕೆ ಭಾರತ ನೆರವು ನೀಡಲಿದೆ.  ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಭೇಟಿ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೊಸ ಮೈಲಿಗಲ್ಲಾಗಿದೆ. ಭಾರತದ "ಮಹಾಸಾಗರ" (MAHASAGAR – Mutual and Holistic Advancement for Security Across the Regions) ದೃಷ್ಟಿಕೋನದಡಿ ನಡೆದ ಭೇಟಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ, ಸ್ಥಿರತೆ ಮತ್ತು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವ "ಬಿಂತಾಂಗ್ ಅದಿಪೂರ್ಣ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST