ಯೋಗ ಎಂಬುದು ಭಾರತದ ಪ್ರಾಚೀನ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಇಂದು ವಿಶ್ವದಾದ್ಯಂತ ಆರೋಗ್ಯ, ಶಾಂತಿ ಮತ್ತು ಸಾಮರಸ್ಯದ ಸಂಕೇತವಾಗಿ ಗುರುತಿಸಿಕೊಂಡಿದೆ. ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಅಥವಾ ಧ್ಯಾನವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮಗಳ ಸಮನ್ವಯ ಸಾಧಿಸುವ ಸಮಗ್ರ ಜೀವನ ಪದ್ಧತಿಯಾಗಿದೆ.
ಭಾರತೀಯರ ದೈನಂದಿನ ಬದುಕಿನಲ್ಲಿ ಯೋಗದ ಪ್ರಭಾವ ಆಳವಾಗಿ ಬೇರೂರಿದೆ. ನಾವು ಬಳಸುವ ಸಂಯೋಗ, ಉಪಯೋಗ, ಪ್ರಯೋಗ, ಯೋಗ್ಯತೆ ಮುಂತಾದ ಪದಗಳಲ್ಲಿಯೂ ಯೋಗದ ಅರ್ಥ ಅಡಗಿದೆ. ಸಂಸ್ಕೃತದ “ಯುಜ್” ಎಂಬ ಧಾತುವಿನಿಂದ ಬಂದಿರುವ ಯೋಗ ಎಂಬ ಪದವು “ಸೇರಿಸುವುದು”, “ಒಗ್ಗೂಡಿಸುವುದು” ಎಂಬ ಅರ್ಥವನ್ನು ಹೊಂದಿದೆ. ಹೀಗಾಗಿ ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯನ್ನು ಒಗ್ಗೂಡಿಸುವ ಮಾರ್ಗವೇ ಯೋಗ.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತೀಯರು ಯೋಗದ ಮಹತ್ವವನ್ನು ಅರಿತುಕೊಂಡಿದ್ದರು. ಮಹರ್ಷಿ ಪತಂಜಲಿಯವರು ತಮ್ಮ ಯೋಗಸೂತ್ರಗಳಲ್ಲಿ ಅಷ್ಟಾಂಗ ಯೋಗದ ತತ್ವಗಳನ್ನು ವಿವರಿಸಿ, ಯೋಗವನ್ನು ವೈಜ್ಞಾನಿಕ ಮತ್ತು ಶಿಸ್ತಿನ ಜೀವನ ಮಾರ್ಗವಾಗಿ ರೂಪಿಸಿದರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ ಎಂಬ ಎಂಟು ಹಂತಗಳು ವ್ಯಕ್ತಿಯನ್ನು ಆತ್ಮಸಾಕ್ಷಾತ್ಕಾರದತ್ತ ಕೊಂಡೊಯ್ಯುತ್ತವೆ.
ಯೋಗದ ಮಹತ್ವವನ್ನು ಅರಿತ ಅನೇಕ ಮಹಾತ್ಮರು, ಸಾಧು-ಸಂತರು, ವಿಜ್ಞಾನಿಗಳು, ಕಲಾವಿದರು ಹಾಗೂ ಕ್ರೀಡಾಪಟುಗಳು ತಮ್ಮ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯೋಗವು ವಿಶ್ವದಾದ್ಯಂತ ಜನಪ್ರಿಯವಾಗಿದ್ದು, ಅನೇಕ ರಾಷ್ಟ್ರಗಳ ಜನರು ಆರೋಗ್ಯಕರ ಜೀವನಕ್ಕಾಗಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತೆ ಪ್ರಸ್ತಾಪಿಸಿದರು. ಈ ಪ್ರಸ್ತಾವನೆಗೆ 177 ರಾಷ್ಟ್ರಗಳ ಬೆಂಬಲ ದೊರೆತು, ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. 2015ರಿಂದ ಪ್ರತಿ ವರ್ಷ ವಿಶ್ವದಾದ್ಯಂತ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿದ್ದು, ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಯೋಗದ ಮೂಲಕ ಆರೋಗ್ಯ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ಜಗತ್ತಿಗೆ ಸಾರಲಾಗುತ್ತದೆ.
ಇಂದಿನ ಒತ್ತಡದ ಜೀವನಶೈಲಿ, ಮಾನಸಿಕ ಆತಂಕ ಮತ್ತು ಆರೋಗ್ಯ ಸಮಸ್ಯೆಗಳ ನಡುವೆ ಯೋಗವು ಅತ್ಯುತ್ತಮ ಪರಿಹಾರವಾಗಿ ಹೊರಹೊಮ್ಮಿದೆ. ನಿಯಮಿತ ಯೋಗಾಭ್ಯಾಸವು ದೈಹಿಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ.

ಆದ್ದರಿಂದ ಯೋಗವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಾಗ ಮಾತ್ರ ಯೋಗದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ಭಾರತೀಯ ಸಂಸ್ಕೃತಿಯ ಈ ಮಹಾನ್ ಕೊಡುಗೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ