ಕುರುಗೋಡು: ಸಿದ್ದಮನಹಳ್ಳಿಯಿಂದ ಮಾರುತಿ ಕ್ಯಾಂಪ್ಗೆ ತೆರಳುವ ರಸ್ತೆಯ ಸಮೀಪದ ಕೃಷಿ ಜಮೀನಿನ ಬಳಿ ವಿದ್ಯುತ್ ಕಂಬವೊಂದು ಸುಮಾರು ತಿಂಗಳಿಂದ ಅಪಾಯಕಾರಿಯಾಗಿ ವಾಲಿಕೊಂಡಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವಿದ್ಯುತ್ ಕಂಬವು ನೆಲದತ್ತ ಹೆಚ್ಚು ವಾಲಿರುವ ಪರಿಣಾಮ ತಂತಿಗಳು ಕೆಳಮಟ್ಟಕ್ಕೆ ಬಂದಿವೆ. ಕಂಬ ಮತ್ತಷ್ಟು ವಾಲಿದರೆ ವಿದ್ಯುತ್ ತಂತಿಗಳು ತುಂಡಾಗಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ರೈತರು ನಿರಂತರವಾಗಿ ಕೃಷಿ ಚಟುವಟಿಕೆ ನಡೆಸುತ್ತಿರುವುದರಿಂದ ಅಪಾಯದ ಭೀತಿ ಹೆಚ್ಚಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳುಅನಾಹುತ ಸಂಭವಿಸುವ ಮುನ್ನ ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವಾಲಿರುವ ಕಂಬವನ್ನು ಸರಿಪಡಿಸುವ ಅಥವಾ ಬದಲಾಯಿಸುವ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.